Tuesday, September 18, 2007

ರಾಧೆ


ಇನ್ನೂ ಸಂಜೆಯಾ ಹೊತ್ತು
ಸೂರ್ಯ ಕಿರಣವ ಹೊದ್ದು
ಹೊಳೆಯುತ್ತ ಜುಳು ಜುಳು ಹರಿಯುತಿದೆ
ಯಮುನೆ ಇಂದೂ ಎಂದಿನಂತೆ

ಹರಿವ ನೀರಲ್ಲಿ ಅಲ್ಲೇ ಕಾಲಿಳಿಬಿಟ್ಟು
ಕೂತವಳು ಅವಳೇ ಮೀನು
ಕಂಗಳ ಚೆಲುವೆ, "ಇಂದು
ಬರುವನೆ ಕೃಷ್ಣನು"? ಎಂದು
ಕಾಯುತಿರುವ ರಾಧೆಯು

ನೀಲಿ ಅಗಸವ ನೋಡಿದಾಗಲೆಲ್ಲ ಅವಳಿಗೆ
ನೀಲ ಮೇಘ ಶ್ಯಾಮ ನದೇ ನೆನಪು
ಬೀಸುತಿರುವ ತಿಳಿಗಾಳಿಯಲ್ಲೂ
ಅವನ ಪ್ರೇಮದ ಕಂಪು

ಹರಿವ ನೀರಿನ ಕಲರವದಲ್ಲೂ ಕೇಳುತಿದೆ
ಅವಳಿಗೆ ಮೋಹನ ಮುರಳಿಯ ಗಾನ
ಹೃದಯ ಹಾಡುತಿರುವ
ಹಾಡಿಗೂ ಅವನ ಪ್ರೀತಿಯದೇ ಸ್ವರ

ಸಂಜೆ ಜಾರುವ ಹೊತ್ತು
ಆವರಿಸುತ್ತಿರುವ ಕತ್ತಲಿನಲ್ಲೂ
ಹುಡುಕುತಿರುವಳು ಕೃಷ್ಣನ ರೂಪವನ್ನೇ
ಮತ್ತೆ ಕೃಷ್ಣ ಕಾಣದಾದಾಗ
ಗಂಟಲುಬ್ಬಿ ದುಃಖ ಉಮ್ಮಳಿಸಿದಾಗ
ಕಣ್ಣಿಂದ ಜಾರಿದ್ದು ಅವನ ನೆನಪಿನ ಬಿಂದು

ಇರುಳಿನ ನಿಶ್ಶಬ್ದ ನೀರವತೆಯಲ್ಲೂ ಕೇಳುತಿದೆ
ಅವಳ ಉಸಿರಿನಲ್ಲೂ ಕೃಷ್ಣನದೇ
ಹೆಸರು, ಮತ್ತೆ ಮತ್ತೆ ಹಲುಬುವಳು
"ನಾಳೆ ಬಂದೆ ಬರುವನು ನನ್ನ ದೇವನು
ನನ್ನ ಸೇರಲೆಂದು..."

ಹರಿಯುತ್ತಲೇ ಇರುವ ಯಮುನೆಯು
ನಿಡುಸುಯ್ಯುವಳು ತನ್ನಷ್ಟಕ್ಕೆ ತಾನು
ಕಾಣುವುದೇ ಮತ್ತೆ ನಾಳೆಯೆಂಬ ಬೆಳಕು?
ಬರುವನೆ ರಾಧೆಯ ಕೃಷ್ಣ?
ಕೊನೆಯಾಗುವುದೇ ರಾಧೆಯ ಕಾಯುವಿಕೆಯು?

7 comments:

Sandeepa said...

ಬಂದೇ ಬುಡ್ತ ಹೇಳಕ್'ಬಪ್ದಿಲ್ಲೆ..
ಬಂದ್ರು ಬಂದ..
ಬಂದ್ರೇ ಒಳ್ಳೇದು ಬಿಡು.:)

ರಂಜನಾ ಹೆಗ್ಡೆ said...

ಶ್ಯಾಮಾ,
ಮತ್ತೆ ಕಣ್ಣೀರ ಕಥೆ ಶುರು ಮಾಡಿದ್ಯಾ ಕೂಸೆ.
ಬತ್ತಾ ಬಿಡೆ. ರಾಧೆದು ಟ್ರೂ ಲವ್ ಆಗಿದ್ರೆ ಖಂಡಿತ ಬಂದೆ ಬತ್ತಾ.
ನಂಗೆ ಸಿಕ್ಕಿದ್ರೆ ಕೃಷ್ಣ ಹೇಳ್ತಿ ರಾಧೆ ಕಾಯ್ತಾ ಇದ್ದಾ ಯಮುನೆ ತೀರದಲ್ಲಿ ಫ್ಲೀಸ್ ಹೋಗಿ ಮೀಟ್ ಆಗಿ ಬಾ ಮರಾಯಾ. ಒಂದು ಸಾರಿ ಲವ್ ಯು ಅಂಥ ಹೇಳ್ಬಿಡು ಕೂಸು ಖುಷಿ ಆಕ್ತು ಹೇಳಿ.
ರಾಧೆಯ ಪ್ರೀತಿಗೆ ಅಷ್ಟು ಶಕ್ತಿ ಇದ್ದು ಖಂಡಿತ ಕೃಷ್ಣ ಹುಡಿಕೊಂಡು ಬತ್ತಾ ಸೋ ಡೊಂಟ್ ವರಿ ಬಿ ಹ್ಯಾಪಿ.

ಶ್ಯಾಮಾ said...

@ Sandeepa

"ಬಂದೇ ಬುಡ್ತ ಹೇಳಕ್'ಬಪ್ದಿಲ್ಲೆ..
ಬಂದ್ರು ಬಂದ.."

ಎಂತೆನ ಗೊತ್ಟಿಲ್ಲೆ ...ಆದ್ರೆ ಬರದೇ ಇಲ್ಲೇ ಅಂತ 100% ಗೊತ್ತಿದ್ದೂ 'ಬಂದ್ರು ಬಂದ' ಅಂತ ಹೇಳ್ತಾ ಕಾಯುವುದರಲ್ಲಿ ಇರುವ ನೋವು ಬಹುಶಃ ರಾಧೆಗಷ್ಟೇ ಗೊತ್ತು

@Ranju
"ರಾಧೆಯ ಪ್ರೀತಿಗೆ ಅಷ್ಟು ಶಕ್ತಿ ಇದ್ದು ಖಂಡಿತ ಕೃಷ್ಣ ಹುಡಿಕೊಂಡು ಬತ್ತಾ "

:)

Sushrutha Dodderi said...

ಶಬರಿ ಕಾದಳಂತೆ ರಾಮನಿಗಾಗಿ:
ಹಣ್ಣು ಕೊಳೆಯುವ ಮುನ್ನ ಬಂದ, ಪುಣ್ಯ!

ಅಹಲ್ಯೆ ಕಾದಳಂತೆ ರಾಮನಿಗಾಗಿ:
ಕಲ್ಲು ಕರಗುವ ಮುನ್ನ ಬಂದ, ಪುಣ್ಯ!

ಪುರಾಣದ ಕತೆಗಳು ಚಂದ.

ಆದರೆ ಇದೆಂತಹ ದುರಂತ ನಂದಕುಮಾರ..?
ನೀನು ಬರುವುದಿಲ್ಲವೆಂದು ಗೊತ್ತಿದ್ದೂ ಕಾಯುವುದು, ನಂದು?
:-) :-)


ಪದ್ಯ ಚನಾಗಿದ್ದು ಶ್ಯಾಮಾ ನಿಂದು.. :)

ಶ್ಯಾಮಾ said...

ಸುಶ್ರುತ..
ಕಾಮೆಂಟು ಕೂಡ ಸೂಪರ್ ಆಗಿದ್ದು ನಿಂದು :) :)

Jagali bhaagavata said...

ಕವನ ತುಂಬ ಭಾವಪೂರ್ಣವಾಗಿದೆ. Keep it up. ಇನ್ನೂ ಹೀಗೆ ಬರೀತಾ ಇರು.

"ನೀಲ ಮೇಘ ಶ್ಯಾಮನದೇ ನೆನಪು".......ಬಹುಶಃ ಕೃಷ್ಣನಿಗೂ 'ಶ್ಯಾಮಾ'ದೇ ನೆನಪು ಅನ್ಸತ್ತೆ. ಅಲ್ವಾ?:-)

ಮತ್ತೆ, ಈ ಬಾರಿ ಕಾಗದದ ದೋಣಿ ಬಿಡಲಿಲ್ವಾ?:-)

ಈ ಸರ್ತಿ ಒಂದೂ ತಪ್ಪು ಮಾಡ್ಲಿಲ್ಲ ನೀನು..Kudos:-)

ಶ್ಯಾಮಾ said...

Thanks :)

ಮಾಡಿದ್ದೇ ತಪ್ಪು ಪದೇ ಪದೇ ಮತ್ತೆ ಮಾಡ್ಬಾರ್ದು ಅಂತ ದೊಡ್ದೋರು ಹೇಳಿದಾರೆ :)