Monday, June 9, 2008

ಹಳೆಯ ಹಾಡೊಂದು ನೆನಪಾಗಿ

ಬೆಳಿಗ್ಗೆ ಎದ್ದಾಗ ಯಾವುದಾದರೂ ಹಾಡು ನೆನಪಾಗಿ ತುಟಿಯ ಮೇಲೆ ನಲಿಯತೊಡಗಿದರೆ ಸಾಕು ಅವತ್ತು ದಿನವಿಡೀ ಅದೇ ಹಾಡೇ ಗುನುಗುತ್ತಿರುತ್ತೇನೆ. ಒಮ್ಮೊಮ್ಮೆ ಇಷ್ಟವಿಲ್ಲದ ಯಾವುದಾದರೂ ಹಾಡೊಂದು ಹತ್ತಿಕೊಂಡು ದಿನವಿಡೀ ಒದ್ದಾಡುತ್ತೇನೆ. ಒಮ್ಮೊಮ್ಮೆ ಬಹಳ ಇಷ್ಟವಾದ ಹಾಡುಗಳು ಹತ್ತಿಕೊಂಡು ಉಲ್ಲಸಿತಳಾಗಿರುತ್ತೇನೆ.

ಇವತ್ತೂ ಹಾಗೇ ಆಯ್ತು. ಬೆಳಿಗ್ಗೆ ಎದ್ದಾಗಲಿಂದ ನನ್ನಿಷ್ಟದ ಹಾಡೊಂದು ತುಟಿಯ ಮೇಲೆ ನಲಿಯುತ್ತಲಿದೆ. ಹಾಡು ಯಾವುದೆಂದರೆ, ಬಹಳ ವರ್ಷಗಳ ಹಿಂದೆ ನಾಟಕವೊಂದಕ್ಕೆ (ಚಂದ್ರಗುಪ್ತ ಮೌರ್ಯ) ನನ್ನ ಅಪ್ಪ ಬರೆದಿದ್ದ ಹಾಡು. ಬಹಳ ಸುಂದರವಾಗಿ ರಾಗ ಸಂಯೋಜಿಸಿ ಹಾಡಿದ್ದರು ಅಪ್ಪ ಆಗ. ಆಗ ನಾನೂ, ಅಕ್ಕನೂ ತುಂಬ ಚಿಕ್ಕವರು. ಆಗೆಲ್ಲ ನಾವು ಹಾಡನ್ನು ತುಂಬ ಮೆಚ್ಚಿಕೊಂಡು, ಕಲಿತುಕೊಂಡು ಯಾವಾಗಲೂ ಅಪ್ಪನೆದುರಿಗೆ ಹಾಡುತ್ತಿದ್ದೆವು. ನಾಟಕವನ್ನು ನೋಡಿದ ನೆನಪನ್ನು ಹಂಚಿಕೊಳ್ಳ ಹೋದರೆ ಅದೊಂದು ದೊಡ್ಡ ಕಥೆಯೇ ಆದೀತು, ಅದೆಲ್ಲ ಇಲ್ಲಿ ಅಮುಖ್ಯ. ಸುಂದರ ಹಾಡನ್ನು ಎಲ್ಲರೊಡನೆ ಹಂಚಿಕೊಳ್ಳುವ ಮನಸ್ಸಾಯಿತು. ಮನಸು ರಾಗವಾಗಿ ಹಾಡನ್ನು ಇನ್ನೂ ಗುನುಗುತ್ತಲೇ ಇದೆ, ಹಳೆಯ ದಿನಗಳಲ್ಲೆಲ್ಲೋ ಕಳೆದುಹೋಗಿದ್ದೇನೆ ಅನ್ನಿಸುತ್ತಿದೆ. :)

ಇಲ್ಲಿದೆ ಹಾಡು.
** ಚಂದ್ರಗುಪ್ತ ಮೌರ್ಯ **
ಪಾಟಲಿಪುತ್ರದ ಅಧಿಪತಿಯಾಗಿ
ಸರ್ವಾರ್ಥಸಿದ್ದಿಯು ಆಳುತಲಿರಲು
ಪಟ್ಟದರಸಿಯಲಿ ನಂದನರುದಯಿಸಿ
ಇಷ್ಟದರಸಿಯಲಿ ಮೌರ್ಯರು ಜನಿಸಿ

ಶೂರ ಮೌರ್ಯನಿಗೆ ನೂರು ತನುಜರು
ಅವರ ಶೌರ್ಯವನು ಸಹಿಸದ ನಂದರು
ಸಮಯ ಸಾಧಿಸಿ ಸೆರೆಯಲಿ ಇರಿಸಿ
ತುತ್ತು ಅನ್ನವನು ಮಾತ್ರವೇ ಒದಗಿಸಿ
ಕೊಲ್ಲಲವರನು ಹವಣಿಸಿದ||

ಸೇಡು ತೀರಿಸೆ ಮೌರ್ಯರು ಚಿಂತಿಸಿ
ತಮ್ಮಾಹಾರವ ಒಬ್ಬನಿಗುಣಿಸಿ
ಚತುರ ಚಂದ್ರನನು ಉಳಿಸಿದರು
ನಂದರ ನಾಶಕೆ ಅಸುನೀಗಿದರು||

ಕಪಟ ಶಿಲ್ಪವನು ಭೇದಿಸಿ ಚಂದ್ರನು
ಬಿಡುಗಡೆಯಾಗಿ ಹೊರಗೆ ಬಂದನು
ಅನ್ನ ಸತ್ರದ ಆ ಹೊರ ಮನೆಯಲಿ
ಬಂಧಿಯಾದನು ಬೇರೆ ರೂಪದಲಿ ||

ಯೋಗಿಯೊಬ್ಬನು ಸತ್ರಕೆ ಬಂದನು
ನಂದರಿಂದ ಅಪಮಾನಿತನಾದನು
ಕುಪಿತನಾಗಿ ಆ ಚಾಣಕ್ಯ
ಶಪಥಗೈದನು ನಂದರಂತ್ಯಕೆ ||

ಚಂದ್ರಗುಪ್ತನನು ಸಖನನಾಗಿಸಿ
ಪರ್ವತರಾಜನ ಸಖ್ಯವ ಬೆಳೆಸಿ
ನಂದಾರಾಳ್ವಿಕೆ ಅಂತ್ಯವಗೊಳಿಸಿ
ಚಂದ್ರಗುಪ್ತನನು ದೊರೆಯಾಗಿಸಿದ||

4 comments:

ತೇಜಸ್ವಿನಿ ಹೆಗಡೆ said...

ಶ್ಯಾಮಾ..

ಹಾಡು ಚೆನ್ನಾಗಿದೆ..ಕೇಳುವಂತೆಯೂ ಆಗಿದ್ದಿದ್ದರೆ ಮತ್ತೂ ಚೆನ್ನಾಗಿತ್ತು. ನನಗೆ ಎಷ್ಟೋ ಸಲ ಹಾಡೊಂದರ ರಾಗ ಮಾತ್ರ ನೆನಪಿಗೆ ಬಂದು ಅದರ ಸೊಲ್ಲು ಬಾಯಿಗೆ ಬರದೆ ದಿನವಿಡೀ ಒದ್ದಾಡಿದ್ದಿದೆ.. ಅವರಿವರಿಗೆ ಫೋನ್ ಮಾಡಿ ಕೇಳಿ ತಲೆಚಿಟ್ಟೂ ಹಿಡಿಸಿರುವೆ..;-)

Jagali bhaagavata said...

ಬೇಧಿಸಿ? ಅಥ್ವಾ ಭೇದಿಸಿ?

ಶ್ಯಾಮಾ said...

ತೇಜಸ್ವಿನಿ,

ಹೌದು ನಂಗೂ ಹಂಗೆ ಆಗ್ತು ಒಂದೊಂದು ಸಲ, ಯಾವಾಗಲೂ ಅಕ್ಕನ ತಲೆ ಕೆಡ್ಸ್ತಿ :)

ಹಾಡು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು

ಭಾಗವತರು,

ಸರಿ ಮಾಡಿದ್ದೇನೆ ಈಗ :)
ಹಿಂಗೆ ಆವಾಗಾವಾಗ ತಪ್ಪುಗಳು :) ಬರೀಬೇಕಾದ್ರೆ ಬಹಳ confusion ಆಯ್ತು. ಆಮೇಲೆ ತಪ್ಪೇ ಸರಿ ಅನ್ಸಿತ್ತು :)

ಧನ್ಯವಾದಗಳು.

ಸ್ಮಿತಾ said...

chanagide shyami :)