Wednesday, December 17, 2008

ಅವಳು

ಒದ್ದೆ ಪಾದಗಳ ಹೆಜ್ಜೆ ಜಾಡಿನಲ್ಲಿ ನಡೆಯಹೊರಟವಳು
ಕಾರಿರುಳ ಬಾನಿನಲಿ ಚಂದಿರನ ಹುಡುಕಿದಳು
ನದಿಯಲ್ಲದವಳು ಎಲೆಯಮೇಲೆ ಬಿದ್ದ ಮಳೆಹನಿಯಂಥವಳು
ಕಡಲ ಸೇರಲು ಹೊರಟಳು.
ದನಿಯಿಲ್ಲದವಳು ಮೌನಿ ಶಿಲೆಯಂಥವಳು
ಎದೆರಾಗವಾಗಲವಣಿಸಿದಳು.
ಬಾನಲ್ಲಿ ರವಿ ಜಾರಿದಾಗ ಕವಿದ ಮುಸ್ಸಂಜೆಯಂಥವಳು
ಎಣ್ಣೆಯಾರಿದ ಹಣತೆಯನು ಕಣ್ಬೆಳಕಿನಲಿ ಬೆಳಗುವವನಿಗಾಗಿ ಕಾದಳು.

ಚದುರಿದ ಕನಸುಗಳ ಹೆಕ್ಕಿತರಲು ಹೊರಟವಳು
ಹೊಳೆವ ಕಂಗಳಲಿ ನಕ್ಕವಳು
ಅಂಗಳದ ಗಿಡದಲ್ಲಿ ಬಿರಿದ ಮಲ್ಲಿಗೆಯಂಥವಳು
ವೈಶಾಖದ ಸುಡುಹಗಲಿನಲಿ
ಒದ್ದೆ ಪಾದಗಳ ಜಾಡಿನಲ್ಲಿ ನಡೆಯಹೊರಟಳು
ನಿನ್ನೆಯಾಗಸದಲಿ ಕಂಡಿದ್ದ ಚುಕ್ಕಿಯಂತೆ ಕಳೆದುಹೋದಳು.

Thursday, November 13, 2008

ಎಲ್ಲಿದೆ ನಮ್ಮನೆ?

[ಮಕ್ಕಳ ದಿನಕ್ಕೆಂದು ಒಂದು ಚಂದದ ಕಥೆ ಬರೆಯಬೇಕೆಂದು ಯೋಚಿಸುತ್ತಾ ಕೂತಿದ್ದೆ. ಹಳೆಯದೊಂದಿಷ್ಟು ಹಾಳೆಗಳನ್ನು ತಡಕುತ್ತಿದ್ದವಳಿಗೆ ಅವತ್ಯಾವತ್ತೋ ನಾನು ಬರೆದಿಟ್ಟಿದ್ದ ಈ ಕಥೆ ಸಿಕ್ಕಿತು. ಸುಮ್ಮನೆ ಓದಿಕೊಂಡೆ. ಓದಿ ಮುಗಿಸಿದವಳಿಗೆ ಮತ್ತೇನೂ ಬರೆಯುವ ಮನಸ್ಸಾಗಲಿಲ್ಲ, ಈ ಕಥೆಯೇ ಏನೆಲ್ಲಾ ಹೇಳುತ್ತಿದೆ ಎನ್ನಿಸಿತು, ಹಾಗೇ ಕಥೆಯನ್ನು ಬ್ಲಾಗಂಗಳಕ್ಕೆ ಕರೆತಂದೆ .]

ರಾತ್ರಿಯಾಗಸದಲ್ಲಿ ಹರವಿಕೊಂಡಿದ್ದ ಚುಕ್ಕಿಗಳನ್ನು ನೋಡುತ್ತಿದ್ದೆ ನಾನು. ಎಲ್ಲ ಚುಕ್ಕಿಗಳೂ ಒಂದರಿಂದಿನ್ನೊಂದು ದೂರವಾಗಿ ಛಿದ್ರ ಚಿದ್ರವಾಗಿ ಬಿದ್ದುಕೊಂಡಿದ್ದವು . ಹತ್ತಿರ ಹತ್ತಿರವಾಗಿ ಹೂಗುಚ್ಚದಂತೆ ಕಾಣುವ ಚುಕ್ಕಿಗಳೆಲ್ಲಾದರೂ ಇದ್ದಾವಾ? ಎಂದು ದೂರ ದೂರದವರೆಗೆ ಕಣ್ಣು ಹಾಯಿಸಿ ನೋಡಿದೆ.. ಊಹುಂ ಯಾಕೋ ಎಲ್ಲೂ ಕಾಣಲಿಲ್ಲ .. ಕಂಗಳು ಹನಿಗೂಡಿದವು ಚುಕ್ಕಿಗಳ ಕಥೆಯೂ ನಮ್ಮನೆಯ ಕಥೆಯಂತೆಯೇ ಆಗಿದೆಯ ಅನ್ನಿಸಿ. ದೂರದಲ್ಲಿ ಯಾವುದೋ ಒಂಟಿ ಚುಕ್ಕಿಯೊಂದು ನನ್ನಂತೆಯೇ ಬಿಕ್ಕಳಿಸುತ್ತಿದೆಯೇನೋ ಅನ್ನುವ ಹಾಗೆ ಕಂಡಿತು. ಇಂಥದೇ ರಾತ್ರಿಗಳಲ್ಲಿ ಅಪ್ಪ ನಂಗೆ ಆಗಸದಲ್ಲಿ ಒಟ್ಟೊಟ್ಟಿಗಿರುತ್ತಿದ್ದ ಚುಕ್ಕಿಗಳನ್ನು ತೋರಿಸಿ "ನೋಡು ಅದು ನಾನು,ಮಧ್ಯದಲ್ಲಿರೋದು ನೀನು, ಮತ್ತೆ ಅದರ ಪಕ್ಕದಲ್ಲಿರೋದು ಅಮ್ಮ" ಅನ್ನುತ್ತಿದ್ದ. ಅಮ್ಮ ಚಂದದೊಂದು ನಗೆ ನಗುತ್ತಿದ್ದಳು. ನಂಗೆ ಅದನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿರಲಿಲ್ಲ , ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳುತ್ತಿದ್ದೆ, ದಿನಾಲೂ " ಅಪ್ಪ ಅಮ್ಮ ನಾನು" ಎಂಬ ಚುಕ್ಕಿಗಳನ್ನು ನೋಡಿ ಖುಶಿಪಡ್ತಿದ್ದೆ. ಪ್ರತಿಬಾರಿಯೂ ಅಮ್ಮ "ಎಷ್ಟು ಚಂದವಿದೆ ಈ ರಾತ್ರಿ ,ಇದು ಹೀಗೇ ಇರಲೇನೋ ಅನ್ನಿಸ್ತಿದೆ " ಅನ್ನುತ್ತಿದಳು. ಅವಾಗೆಲ್ಲ ನಂಗೂ ಹಾಗೇ ಅನ್ನಿಸ್ತಿತ್ತು .

ಆದರೆ ಈಗೆಲ್ಲ ನನಗೆ ರಾತ್ರಿ ಆಗಸದಲ್ಲಿ ಯಾರೂ ಚುಕ್ಕಿಗಳನ್ನು ತೋರಿಸುವುದೇ ಇಲ್ಲ. ಬೇಗ ಮಲಗು ಎಂದು ನನ್ನನ್ನು ಗದರಿಸುವ ಅಮ್ಮ ರಾತ್ರಿಯ ಕತ್ತಲಲ್ಲಿ ಬಿಕ್ಕಳಿಸುತ್ತಲೇ ಇರುತ್ತಾಳೆ. ಯಾಕೆಂದು ನನಗೆ ಹೇಗೆ ಅರ್ಥವಾಗಬೇಕು ? ಅದಕ್ಕೇ ಈಗೀಗ ನಾನು ರಾತ್ರಿಯನ್ನು ದ್ವೇಷಿಸುತ್ತೇನೆ . ಬೇಗ ರಾತ್ರಿ ಕಳೆದು ಬೆಳಗಾಗಲಿ ಎಂದುಕೊಳ್ಳುತ್ತೇನೆ , ಏಕೆಂದರೆ ಬೆಳಗಿನಲ್ಲಿ ಅಮ್ಮ ಬಿಕ್ಕಳಿಸುವುದಿಲ್ಲ .

"ಚುಕ್ಕೀ , ಚುಕ್ಕೀ... "

ಯೋಚನೆಗಳನ್ನು ಸುತ್ತ ಹರವಿಕೊಂಡು ನಿಂತವಳಿಗೆ ಅಮ್ಮ ಕೂಗಿದಾಗಲೇ ಈಚಿನ ಅರಿವಾದದ್ದು. ಅಮ್ಮನಿಗೆ ಗೊತ್ತಾಗಬಾರದೆಂದು ಕೊಳವಾಗಿದ್ದ ಕಣ್ಣುಗಳನ್ನು ಬೇಗ ಬೇಗನೆ ಒರೆಸಿಕೊಂಡೆ .

"ಚುಕ್ಕಿ ಕತ್ತಲಲ್ಲಿ ನಿಂತು ಏನು ಮಾಡ್ತಿದೀಯ? ಹೊತ್ತಾಯ್ತು ಬೆಳ್ಗೆ ಬೇಗ ಏಳಬೇಕು ಹೋಗಿ ಮಲ್ಕೋ " ಅಮ್ಮ ಅಂದಾಗ ಒಲ್ಲದ ಮನಸ್ಸಿಂದ ಒಳ ನಡೆದೆ .

ಮಲಗಿದರೂ ಕಂಗಳಿಗೆ ನಿದ್ದೆ ಬಾರದು. ಮತ್ತದೇ ಯೋಚನೆ. ಅಪ್ಪನಿಲ್ಲದ ಮನೆಯಲ್ಲಿ ಇರುವುದೇ ಬೇಜಾರು. ಈ ಅಮ್ಮನಿಗೆ ಹೇಗೆ ಹೇಳಲಿ ಅದನ್ನು. ಸಂಜೆ ಶಾಲೆಯಿಂದ ಬಂದಕೂಡಲೇ ಆಟವಾಡಿಸುವ ಅಪ್ಪ , ಅಮ್ಮನಿಗೆ ಗೊತ್ತಾಗದಂತೆ ರಾಶಿ ರಾಶಿ ಚಾಕಲೇಟುಗಳನ್ನು ಜೇಬಿಂದ ಹೊರತೆಗೆದು ಮುಚ್ಚಿ ಮುಚ್ಚಿ ಕೊಡುವ ಅಪ್ಪ, ನನ್ನೆಲ್ಲ ಮಾತುಗಳಿಗೆ ಕಿವಿಯಾಗುವ ಅಪ್ಪ, ಅಮ್ಮ ಬೈದಾಗಲೆಲ್ಲ ಮುದ್ದುಗರೆವ ಅಪ್ಪ,ಅವನಿಲ್ಲದ ಈ ಮನೆಯಲ್ಲಿ ನಾ ಇರುವುದಾದರೂ ಹೇಗೆ?

ಈಗೀಗ ದಿನಾ ಇಂಥದೇ ಯೋಚನೆಗಳಲ್ಲೇ ರಾತ್ರಿ ಕಳೆದು ಬೆಳಗಾಗುತ್ತದೆ .

***************

ಮೆಲ್ಲನೆ ಬೀರು ಬಾಗಿಲು ತೆಗೆದೆ. ಒಂದಿಷ್ಟು ಬ್ರಶ್ಶುಗಳು , ಬಣ್ಣದ ಟ್ಯುಬುಗಳು, ಪೇಂಟಿಂಗ್ ಹಾಳೆಗಳು .. ಅರ್ಧ ಚಿತ್ರಿಸಿದ ಚಿತ್ರಗಳು ಎಲ್ಲ ಕಂಡವು . ಅಲ್ಲೇ ಕೆಳಗೆಲ್ಲ ಹುಡುಕಿದೆ .. ಹಿಂದೊಮ್ಮೆ ನಮ್ಮನೆಯ ಗೋಡೆಗಳನ್ನೆಲ್ಲ ಅಲಂಕರಿಸಿದ್ದ ಚಿತ್ರಗಳಿಗಾಗಿ. ಊಹುಂ ಎಲ್ಲೂ ಕಾಣಲಿಲ್ಲ ಅವು. ಮತ್ತೆ ಕಂಗಳು ಹನಿಗೂಡಿದವು . ಮತ್ತೆ ಆ ಹಳೆಯ ದಿನಗಳ ನೆನಪಾಯ್ತು . ಅಪ್ಪನಿಗೆ ಪೇಂಟಿಂಗ್ ಅಂದರೆ ತುಂಬ ಪ್ರೀತಿ , ಅಮ್ಮನಿಗೆ ಅಪ್ಪನ ಪೇಂಟಿಂಗಳೆಂದರೆ ಪ್ರಾಣ. ಅಪ್ಪ ಚಿತ್ರಗಳಿಗೆ ಬಣ್ಣ ಹಚ್ಚುತ್ತಿದ್ದರೆ ಅಮ್ಮ ತನ್ಮಯಳಾಗಿ ಅದು ಮುಗಿಯುವವರೆಗೂ ಕೂತಿರುತ್ತಿದ್ದಳು. ನಾನು ಬಣ್ಣಗಳೊಡನೆ ಆಡುತ್ತಿದ್ದೆ .. ನಾನು ಚಿತ್ರ ಬರೆಯುತ್ತೇನೆ ಎಂದು ಹಠ ಮಾಡಿ ಮುಖ ಕೈ ಕಾಲಿಗೆಲ್ಲ ಬಣ್ಣ ಬಳಿದುಕೊಂಡು ಆಡುವುದರಲ್ಲಿ ಏನೋ ಖುಷಿ ಇತ್ತು . ಬಣ್ಣಗಳ ಲೋಕದಲ್ಲಿ ನಾವು ಮೂವರೂ ಕಳೆದುಹೋಗುತ್ತಿದ್ದೆವು .

ಆದರೆ ಈಗೆಲ್ಲ ಅಪ್ಪ ಚಿತ್ರ ಬರೆದು ಬಣ್ಣ ಬಳಿಯುವುದೇ ಇಲ್ಲ. ಅಪ್ಪ ಬರೆದಿದ್ದ ಚಿತ್ರಗಳೆಲ್ಲ ಎಲ್ಲಿ ಹೋದವೆಂದೇ ನನಗೆ ಗೊತ್ತಿಲ್ಲ. ಚಿತ್ರ ಬರೆ ಎಂದರೆ "ನಾನು ಇನ್ನು ಯಾವತ್ತೂ ಚಿತ್ರಗಳಿಗೆ ಬಣ್ಣ ಹಚ್ಚುವುದಿಲ್ಲ" ಎಂದ ಅಪ್ಪ . ಯಾಕೆ ಹಾಗೋ ? ನನಗೆ ಗೊತ್ತಿಲ್ಲ. ನಾನು ಹೀಗೆ ಹಳೆಯ ಅಪೂರ್ಣ ಚಿತ್ರಗಳನ್ನು, ಬಣ್ಣಗಳನ್ನು ಹರವಿಕೊಂಡಿದ್ದನ್ನು ನೋಡಿದರೆ, ಅಪ್ಪ ದಿನವಿಡೀ ಮಂಕಾಗುತ್ತಾನೆ . ಸರಿಯಾಗಿ ಮಾತೇ ಆಡನು. ಬಣ್ಣಗಳನ್ನು ನೋಡಿದರೆ ಅಪ್ಪನಿಗೆ ಅಷ್ಟು ಬೇಸರವಾ? ನನಗೂ ಈಗೀಗ ಬಣ್ಣಗಳೆಂದರೆ ದ್ವೇಷ .

ಕೈಗೆ ತಾಗಿದ್ದ ಚೂರು ಬಣ್ಣವನ್ನು ಬೇಗ ಬೇಗನೆ ಒರೆಸಿಕೊಂಡೆ, ನಾನು ಈ ಕೋಣೆಗೆ ಬಂದಿದ್ದೆನೆಂದು ಅಪ್ಪನಿಗೆ ಗೊತ್ತಾಗಬಾರದೆಂದು ಮೆಲ್ಲನೆ ಹಾಲಿಗೆ ಬಂದು ಸೋಫಾದ ಮೇಲೆ ಉರುಳಿಕೊಂಡೆ .

"ಚುಕ್ಕಿ, ಏಳು ರೆಡಿ ಆಗು , ನಾನು ಇದೀಗ ರೆಡಿ ಆಗಿ ಬಂದುಬಿಡ್ತೀನಿ . ಹೊರಗಡೆ ಸುತ್ತಾಡಿಕೊಂಡು ಊಟ ಮಾಡಿಕೊಂಡು ಬರೋಣ " ಅಪ್ಪ ಹೇಳಿದಾಗ ಮೆಲ್ಲನೆದ್ದು ಹೊರಟೆ.

ಅಮ್ಮನಿಲ್ಲದ ಈ ಮನೆಯಾದರೂ ಎಂತದು ? ಬೆಳ್ಬೆಳಿಗ್ಗೆ ನನ್ನನ್ನು ಮುದ್ದಿಸುತ್ತ ಎಬ್ಬಿಸಿ ಸ್ನಾನ ಮಾಡಿಸಿ , ರೆಡಿ ಮಾಡಿ ಪಪ್ಪಿ ಕೊಡುವ ಅಮ್ಮ, ನಲ್ಮೆ ಮಾತುಗಳಾಡುತ್ತಾ ತುತ್ತಿಡುವ ಅಮ್ಮ, ತೊಡೆಮೇಲೆ ಮಲಗಿಸಿಕೊಂಡು ಕಥೆ ಹೇಳುವ ಅಮ್ಮ, ಅಂಥ ಅಮ್ಮನಿಲ್ಲದ ಇಲ್ಲಿ ನಾನು ದಿನಗಳೆವುದಾದರೂ ಹೇಗೆ?

ವೀಕೆಂಡು ಕಳೆಯಲು ಅಪ್ಪನಿರುವ ಮನೆಗೆ ಬಂದಿದ್ದೇನೆ . ಮೊದಲಾದರೆ ನಮ್ಮನೆ ಅನ್ನುವುದೊಂದಿತ್ತು . ಈಗ ಅಪ್ಪನಿಗೊಂದು ಮನೆ, ಅಮ್ಮನಿಗೊಂದು ಮನೆ! ಆ ನಮ್ಮನೆಯೆಂಬುದು ಎಲ್ಲಿ ಹೋಯ್ತು ??

***************

ಅವತ್ತು ಮನೆಯೆದುರಿನ ರೆಸ್ತೆಯಾಚೆಗೆ ಇದ್ದ ಪಾರ್ಕಿನಲ್ಲಿ ಆಡುತ್ತಿದ್ದಾಗ ಪುಟಾಣಿ ಹುಡುಗಿಯೊಬ್ಬಳ ಕೈ ಹಿಡಕೊಂಡು ಅವಳ ಆಚೆ ಈಚೆ ಅವಳ ಅಪ್ಪ ಅಮ್ಮ
ಹೋಗುತ್ತಿರುವುದು ನೋಡಿದೆ . ಹಿಂದೊಮ್ಮೆ ನಾನೂ ಹೀಗೆ ಇದ್ದ ನೆನಪಾಯ್ತು . ಈಗೆಲ್ಲಿ ಅದು? ಎಷ್ಟು ಚಂದನೆಯ ಪುಟ್ಟ ಸಂಸಾರ ನಮ್ಮದಾಗಿತ್ತು . ಹೀಗಾಗಿದ್ದು ಯಾಕೆ? ಎಲ್ಲ ಚೆನ್ನಾಗಿರುವಾಗ ಒಂದು ದಿನ ಅಪ್ಪ ಅಮ್ಮ ಒಬ್ಬರ ಮೇಲೊಬ್ಬರು ಮುನಿಸಿಕೊಂಡಿದ್ದಾದರೂ ಹೇಗೆ? ಅಮ್ಮ ಅಳುತ್ತಿದ್ದಳು , ಅಪ್ಪ ಮಂಕಾಗಿದ್ದ . ಹಾಗೆಯೇ ಇನ್ನೊಂದು ದಿನ ಅಮ್ಮ ಹೊರಟೆ ಬಿಟ್ಟಳು ನನ್ನ ಕೈಹಿಡಕೊಂಡು , ನಮ್ಮನೆಯನ್ನು ಬಿಟ್ಟು. ಮತ್ತೆ ದಿನಾಲೂ ಅಪ್ಪ ಅಮ್ಮ ಅದೇನೇನೋ ಮಾತಾಡುತ್ತಿದ್ದರು. ಆದರೆ ಮತ್ತೆಂದೂ ನಾವೆಲ್ಲ ಒಟ್ಟಾಗಲೇ ಇಲ್ಲ.

***************

ಮೊನ್ನೆ ಅಮ್ಮ ಯಾರೊಡನೆಯೋ ಹೇಳುತ್ತಿದ್ದಳು "ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳುವೆ, ನನ್ನ ಮಗಳಿಗೆ ಚಂದದ ನಾಳೆ ಕಟ್ಟಿಕೊಡುವ ಕನಸೂ ನನ್ನದೇ" ಇನ್ನೂ ಏನೇನೋ ...

ಅಪ್ಪ ಯಾರಲ್ಲಿಯೋ ಹೇಳುತ್ತಿದ್ದ " ಯಾರೂ ಇಲ್ಲದೆಯೇ ಬದುಕಲೇಬೇಕಾಗಿದೆ .ಭಾವನೆಗಳೆಲ್ಲ ಎಂದೋ ಸತ್ತಿವೆ , ಮಗಳಿಗೊಂದು ಚಂದದ ನಾಳೆಯನ್ನು ಚಿತ್ರಿಸುವುದೇ ಈಗ ಉಳಿದಿರುವ ಒಂದೇ ಒಂದು ಕನಸು" ಇನ್ನೂ ಏನೇನೋ...

ಎಲ್ಲವನ್ನೂ ಅವರವರೆ ನಿರ್ಧಾರ ಮಾಡಿದಂತಿದೆ .. ನನ್ನದು ? ಏನಿದೆ ? ಚಂದದ ನಾಳಿನ ಭರವಸೆಯಷ್ಟು ಸಾಕೆ ನನಗೆ? ನಮ್ಮದೇ ಎಂಬ ಪುಟ್ಟ ಸಂಸಾರ, ಪುಟ್ಟು ಪುಟ್ಟು ಪ್ರೀತಿ , ನಗು, ಚಿಕ್ಕ ಚಿಕ್ಕ ಸಂತಸಗಳು ಎಲ್ಲ ಇವತ್ತಿಗೆ ಬೇಡವೇ ? ನಂಗೆ ಬರೀ ಅಪ್ಪ, ಬರೀ ಅಮ್ಮ ಬೇಡ.. ಅಪ್ಪ-ಅಮ್ಮ ಬೇಕು ಅನ್ನುವುದನ್ನು ಹೇಗಾದರೂ ಇವರಿಗೆ ನಾನು ಅರಿಕೆ ಮಾಡಿಕೊಡಲಿ?

***************

ಕಾರು ಗಕ್ಕನೆ ನಿಂತಿತು. ಪರಿಚಯದವರಾರನ್ನೋ ನೋಡಿ ಅಪ್ಪ ಕಾರು ನಿಲ್ಲಿಸಿದ. ಹೊರಗೆ ನೋಡಿದೆ ನಾವು ಮೊದಲಿದ್ದ ಮನೆಯ ಎದುರೇ ಕಾರು ನಿಂತಿದ್ದು . ಕಿಟಕಿಯಾಚೆ ನೋಡಿದೆ, ಕತ್ತನ್ನು ಇನ್ನೂ ಹೊರಚಾಚಿ ನೋಡಿದೆ, ನಾನು ಅಂದೊಮ್ಮೆ ಬಿಳಿಯ ಹಾಳೆಯ ಮೇಲೆ ಕುಂಚವನ್ನು ಬಣ್ಣದಲ್ಲದ್ದಿ ಮುದ್ದಾದ ಅಕ್ಷರದಲ್ಲಿ "ನಮ್ಮನೆ" ಎಂದು ಬರೆದು ಬಾಗಿಲಿಗೆ ಅಂಟಿಸಿದ್ದು ಕಾಣಿಸುತ್ತದಾ ಎಂದು. ಅದು ಅಲ್ಲಿ ಇದ್ದ ಹಾಗೆ ಕಾಣಲಿಲ್ಲ. ಅಪ್ಪ ಅದ್ಯಾರಿಗೋ ಹೇಳುತ್ತಿದ್ದ "ಹಳೆಯ ನೆನಪುಗಳೊಟ್ಟಿಗೆ ಈ ಮನೆಯಲ್ಲಿರುವುದು ಕಷ್ಟವಾಯ್ತು , ಅದ್ಕೆ ಕೊಟ್ಟುಬಿಟ್ಟೆ "..

ಎಲ್ಲ ಮುಗಿದಮೇಲೆ ಎಲ್ಲೂ ಇಲ್ಲದ ನಮ್ಮನೆಯನ್ನು ಹುಡುಕುವುದು ವ್ಯರ್ಥ ಎಂದು ಮನಸು ಕೂಗುತ್ತಿದ್ದರೂ ಕಣ್ಣಂಚಿನಿಂದ ಹನಿ ಜಾರುವುದನ್ನು ನಾ ತಡೆಯುವುದಾದರೂ ಹೇಗೆ?

Friday, October 10, 2008

ಹಿಂದೆ ನೋಡದ..

"ಮಾತು ಮಾತಿಗೂ ನೀ ಅಳುವುದು ಯಾಕೆ? ನಂಗೆ ಇಷ್ಟವಾಗೋದಿಲ್ಲ ಅದು ನೋಡು" ನೀ ಹೇಳಿದ ಮಾತು ನೆನಪಾಯ್ತು. ನಿಂಗೆ ಇಷ್ಟವಿಲ್ಲದ್ದನ್ನು ನಂಗಿಷ್ಟವಾಗಿದ್ದಾದರೂ ಮಾಡಲು ನನ್ನ ಮನಸ್ಸೊಪ್ಪುತ್ತಿರಲಿಲ್ಲ . ಆದರೆ ಮಾತು ಮಾತಿಗೆ ಅಳುವುದನ್ನು ಮಾತ್ರ ನನ್ನಿಂದ ತಡೆದುಕೊಳ್ಳುವುದಕ್ಕಾಗುತ್ತಿರಲಿಲ್ಲ. ನದಿಯ ಭೋರ್ಗರೆತ ಹೆಚ್ಚಾದಾಗ ಕಟ್ಟಿದ ಓಡ್ದಾದರೂ ಒಡೆಯದೇ ತಾನು ಇನ್ನೇನು ಮಾಡೀತು? ಹಾಗಿತ್ತು ನನ್ನ ಸ್ಥಿತಿ.

ಆದರೆ ಈಗ ಹಾಗಿಲ್ಲವೇ ಇಲ್ಲ. ನನಗೆ ಅಳಬೇಕೆನಿಸಿದರೂ ಅಳು ಬರುವುದಿಲ್ಲ , ದುಃಖ ಉತ್ಕಟವಾದಾಗಲೂ ಸಹ. ನದಿ ಭೋರ್ಗರೆಯುವುದೇ ಇಲ್ಲ, ಬತ್ತಿದ ನದಿ ಭೋರ್ಗರೆವುದಾದರೂ ಹೇಗೆ?ಎಂದೋ ಮುರಿದು ಬಿದ್ದ ಒಡಕಲು ಒಡ್ಡು ಕೂಡ ನದಿಯನ್ನು ಕಾಯುವ ಹಂಗಿಲ್ಲದೆ ಹಾಯಾಗಿ ಬಿದ್ದುಕೊಂಡಿದೆ .

ಆದರೆ ನಿನ್ನ ನೆನಪುಗಳದೊಂದು ಎಂದೂ ಬತ್ತದ ಒರತೆ .. ನನ್ನ ನಗುವಿನಲ್ಲಿರಲಿ, ನೋವಿನಲ್ಲಿರಲಿ ಮನದಲ್ಲಿ ಸದಾ ಹರಿಯುವ ನದಿ ನಿನ್ನ ನೆನಪು. ನಾ ಸಣ್ಣವಳಿದ್ದಾಗ ಗಾಳಿಪಟದ ದಾರ ಹಿಡಿದು ಓಡುವಾಗ ಎಡವಿ ಬಿದ್ದು ಅಳುವಾಗ ಎತ್ತಿಹಿಡಿದು ಕಣ್ಣೀರು ಒರೆಸಿ ನೀ ಸಮಧಾನಿಸುತ್ತಿದ್ದ ನೆನಪಿನಿಂದ ಹಿಡಿದು, ನಾನು ಸ್ಕೂಲು ಕಾಲೇಜುಗಳಲ್ಲಿ ವೇದಿಕೆಯ ಮೇಲೆ ನಿಂತು ಉದ್ದುದ್ದ ಭಾಷಣ ಹೇಳುವಾಗ ಮೆಚ್ಚುಗೆಯ ಕಂಗಳೊಡನೆ ನೀ ಹುರಿದುಂಬಿಸುತ್ತಿದ್ದ ನೆನಪುಗಳಿಂದ ಹಿಡಿದು, ತಪ್ಪುಗಳಾದಾಗ ಕಿವಿ ಹಿಂಡಿ ಗದರುತ್ತಿದ್ದ ನೆನಪುಗಳು, ಹತ್ತಾರು ಸ್ನೇಹಿತರೊಡನೆ ಹಳ್ಳ ಕಾಡುಗಳ ಸುತ್ತುತ್ತಿದ್ದ ನೆನಪುಗಳೊಡಗೂಡಿ, ಹುಲ್ಲು ಹಾಸಿನ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡುತ್ತಾ ನಾ ನೆಟ್ಟ ಕನಸಿನ ಬಳ್ಳಿಗಳಿಗೆ ನೀ ನೀರೆರೆಯುತ್ತಿದ್ದ ನೆನಪೂ , ಅಷ್ಟೇ ಏಕೆ ? , ಹಿಂದೆ ನೋಡದೆ ನೀ ನಡೆದ ನೆನಪಿನವರೆಗೂ.

"ನಿನ್ನಲ್ಲಿ ನನಗೆ ಪ್ರೇಮವಿತ್ತೆ ? " ನನಗೆಂದೂ ಈ ಪ್ರಶ್ನೆ ಕಾಡಿರಲೇ ಇಲ್ಲ ನಿನ್ನ ಜೊತೆಯಿರುವಾಗ. ನೀ ಹೋದ ಮೇಲೆ ಹರಿಯುತ್ತಿರುವ ನಿನ್ನ ನೆನಪಿನ ನದಿಯಲ್ಲಿ ಕಾಲಿಳಿಬಿಟ್ಟ ನೀರೆಯ ಗೆಜ್ಜೆಗಾಲು ಕಲ್ಲಿಗೆ ತಾಗಿ ಘಲು ಘಲಿಸುವಂತೆ " ನಿನ್ನಲ್ಲಿ ನನಗೆ ಪ್ರೇಮವಿತ್ತೆ ?" ಎಂದು ಹತ್ತಾರು ಸಲ ಪ್ರಶ್ನಿಸಿಕೊಂಡಿದ್ದೇನೆ ನನ್ನೇ ನಾನು. ಗಿರಿಕಾನನಗಳ ಮೌನದಲ್ಲಿ ಕಳೆದುಹೋಗುವ ಸಣ್ಣ ಸದ್ದಿನಂತೆ ಆ ಪ್ರಶ್ನೆಯೂ ಉತ್ತರವಿಲ್ಲದೆ ಕಳೆದು ಹೋಗಿದೆ.

ಅಷ್ಟಕ್ಕೂ ಸ್ನೇಹವೊಂದು ,ಸಂಬಂಧವೊಂದು ಪ್ರೇಮದಲ್ಲೇ ಕೊನೆಗೊಳ್ಳಬೇಕ ? ಹೆಜ್ಜೆ ಹೆಜ್ಜೆಗೂ , ಮಾತು ಮಾತಿಗೂ ನಿನ್ನನ್ನೇ ಅನುಸರಿಸುತ್ತ ಆಪ್ತವಾಗಿದ್ದ ನನ್ನ ನಿನ್ನ ಬಂಧಕ್ಕೆ, ಪವಿತ್ರ ಸಂಬಂಧಕ್ಕೆ, ಕಟ್ಟಿಕೊಂಡ ಸ್ನೇಹಕ್ಕೆ ಪ್ರೇಮ ಎಂಬುದೊಂದೇ ಹಣೆಪಟ್ಟಿಯಾ? ಹಾಗೆಂದು ಎಲ್ಲರೂ ಆಡಿಕೊಳ್ಳುತ್ತಿದ್ದಾಗ ನಾನು ಅದನ್ನು ಕಿವಿಯ ಬಳಿ ಹಾದು ಹೋದ ಧೂಳೆಂಬಂತೆ ಕೊಡವಿ ಸುಮ್ಮನಾಗಿರುತ್ತಿದ್ದೆ. ಮನಸ್ಸುಗಳ ನಡುವಿನ ಆಪ್ತ ಬಾಂಧವ್ಯಕ್ಕೆ ಹೆಸರಿನ ಹಂಗು ಇರಲೇಬೇಕಾ ? ಇಂಥ ಹಲವು ಪ್ರಶ್ನೆಗಳನ್ನೆತ್ತುತ್ತಿದ್ದ ನನ್ನೊಡನೆ ದನಿಯಾಗುತ್ತಿದ್ದ ನೀನೂ ಸಂಬಂಧಗಳ ಸೂಕ್ಷ್ಮತೆಯನ್ನು , ಅದರ ಹರಿವಿನ ಪಾತ್ರವನ್ನೂ ,ಆಳವನ್ನೂ ಅರಿಯದೇ ದೂರ ನಡೆದಿದ್ದೇಕೆ ? ನನಗೆ ಈವರೆಗೂ ಅರ್ಥವೇ ಆಗಿಲ್ಲ. ಇಷ್ಟೆಲ್ಲಾ ಯೋಚಿಸಿದಾಗ ನನ್ನೇ ನಾ ಕೇಳಿಕೊಳ್ಳುತ್ತೇನೆ "ನಿನಗೆ ನನ್ನಲ್ಲಿ ಪ್ರೇಮವಿತ್ತೆ?"

ಓಡುತ್ತಿದ್ದ ಬಸ್ಸು ಗಕ್ಕನೆ ನಿಂತಾಗ ಯೋಚನೆಗಳ ಹರಿವೂ ಗಕ್ಕನೆ ಒಮ್ಮೆ ನಿಂತಂತಾಯ್ತು. ಸಣ್ಣಗೆ ಮಿಸುಕಾಡಿದೆ. ಮೊನ್ನೆ ಪ್ರಣತಿಯ ಮದುವೆಗೆಂದು ಹೊರಟಾಗ ಅಲ್ಲಿ ನೀನು ಬಂದಿರುತ್ತೀಯೆಂದು ಯೋಚಿಸಿಯೂ ಇರಲಿಲ್ಲ ನಾನು . ಬರೋಬ್ಬರಿ 5 ವರ್ಷಗಳ ನಂತರ ನೀನು ಧುತ್ತೆಂದು ಎದುರಾದಾಗ ನನಗೆ ನಂಬುವುದಕ್ಕೇ ಆಗಲಿಲ್ಲ . ಎಲ್ಲರೊಡನೆಯೂ ಅದೇ ಮಾತು ಅದೇ ಹಾವಭಾವ ಒಂದಿನಿತೂ ಬದಲಾದಂತೆ ತೋರಲಿಲ್ಲ ನೀನು , ಆದರೆ ನನ್ನಡೆಗೆ ಮಾತ್ರ ಪಾರದರ್ಶಕವಲ್ಲದ ಆ ಪರದೆ! , ನೀನೇನಾ ನನ್ನ ನೀನು ಅನ್ನಿಸಿತು. ಆದರೂ ಇಲ್ಲಿ ಬೇಸರಿಸಿಕೊಳ್ಳುವುದಕ್ಕೆ ಕಾರಣವಿಲ್ಲ ಅಂದುಕೊಂಡು ಸುಮ್ಮನಾದೆ . ಆದರೆ ಅದೇ ದಿನ ಸಂಜೆ ನಸುಗತ್ತಲು ಕವಿದ ವೇಳೆಯಲ್ಲಿ ನೀ ಹೊರಟಾಗ ನನ್ನಲ್ಲಿ ಚಿಕ್ಕದೊಂದು ನೀರಿಕ್ಷೆಯಿತ್ತು, ಹೆಚ್ಚೇನೂ ಅಲ್ಲ, ನೀ ಹೊರಡುವಾಗ ಹಿಂತಿರುಗಿ ನೋಡುವ ಆ ಒಂದು ನೋಟಕ್ಕಾಗಿ.

ಎಲ್ಲರೂ ಒಬ್ಬರನ್ನೊಬ್ಬರು ಬೀಳ್ಕೊಡುತ್ತಿದ್ದ ಆ ವೇಳೆಯಲ್ಲಿ ನಿನ್ನ ಆ ಒಂದು ನೋಟಕ್ಕಾಗಿ ನಾ ಕಾಯುತ್ತಿದ್ದೆ . ಆದರೆ ಮತ್ತೊಮ್ಮೆ ನನ್ನ ನಿರೀಕ್ಷೆ ಹುಸಿಗೊಳಿಸಲೆಂಬಂತೆ ನೀ ಹಿಂದೆ ನೋಡದೆ ನಡೆದುಬಿಟ್ಟೆ . ನೋವಾಯ್ತು ನನಗೆ. " ಸಂಬಂಧಗಳು ಮಾಗಬೇಕೆ ಹೊರತು ಹಳಸಬಾರದು" , ನಾನಷ್ಟೇ ಅಂದುಕೊಂಡಿದ್ದು ಇದು, ಬೇರೆಯವರಿಗೂ ಹಾಗನಿಸಬೇಕೆಂದಿಲ್ಲವಲ್ಲ . ಪಕ್ಕದಲ್ಲಿದ್ದ ಗೆಳತಿ ನನ್ನ ಮನವನ್ನೋದಿದಂತೆ ಸಮಾಧಾನಿಸುವ ನೋಟ ಬೀರಿದಳು. ನಿಟ್ಟುಸಿರು ಬಿಟ್ಟು, ನೀ ಹಿಂದೆ ನೋಡದೆ ಸಾಗಿದ ಹಾದಿಯತ್ತ ಒಮ್ಮೆ ದೃಷ್ಟಿಹಾಯಿಸಿದೆ , ಮನಸ್ಸು ಕಲ್ಲೆಸೆದ ಕೊಳದಂತಾಗಿತ್ತು.

ತೆರೆದಿದ್ದ ಕಿಟಕಿಯಿಂದ ತಣ್ಣನೆಯ ಗಾಳಿ ತೇಲಿಬಂದು ಮುಖವನ್ನು ನೇವರಿಸಿ ಹೋಯ್ತು . ಕಿಟಕಿಯಾಚೆ ನೋಡಿದೆ, ಓಡುತ್ತಿದ್ದ ಬಸ್ಸಿನೊಡನೆ ಪೈಪೋಟಿ ಹಚ್ಚಿದಂತೆ ಅರ್ಧ ಚಂದ್ರ ಓಡುತ್ತಿದ್ದ, ಮತ್ತಷ್ಟು ನೆನಪುಗಳು ನುಗ್ಗಿಬಂದವು . ನೆನಪುಗಳನ್ನೆಲ್ಲ
ರೆತುಬಿಡಬೇಕು ಅಂದುಕೊಂಡೆ. ಮರುಕ್ಷಣವೇ ನೆನಪುಗಳನ್ಯಾಕೆ ಮರೆಯಬೇಕು ? ನೆನಪುಗಳನ್ನು ಕೆದಕಲೆಂದು ಹಿಂದೆ ನೋಡುತ್ತಾ ನಿಲ್ಲುವುದುಬೇಕಿಲ್ಲ , ನೆನಪನ್ನು ಜೊತೆಗೊಯ್ದು ಮುಂದೆ ಸಾಗಿದರೆ ತಪ್ಪಿಲ್ಲ ಅನ್ನಿಸಿತು. ಈ ನಿರ್ಧಾರದಲ್ಲೂ ಮತ್ತೆ ನಿನ್ನನ್ನೇ ಅನುಸರಿಸುತ್ತಿದ್ದೇನಾ ಅನ್ನುವ ಯೋಚನೆ ಬಂದು ತುಟಿಯ ಮೇಲೊಂದು ಕಿರುನಗೆ ಮೂಡಿ ಮಾಯವಾಯ್ತು. ಮತ್ತೆ
ಹೊರನೋಡಿದೆ ಅರ್ಧ ಚಂದ್ರ ಓಡುತ್ತಲೇ ಇದ್ದ , ಹಿತವೆನಿಸಿತು , ಕಣ್ಮುಚ್ಚಿದೆ. ನಾಳಿನ ಕಾಲೇಜು, ವಿದ್ಯಾರ್ಥಿಗಳು, ಪಾಠ, ಸೆಮಿನಾರು ಎಲ್ಲ ಕಣ್ಮುಂದೆ ತೇಲಿ ಬಂತು. ಕ್ಷಣದಲ್ಲೇ ಕನಸುಗಣ್ಣನ್ನು ನಿದ್ದೆ ಆವರಿಸಿತು.

Friday, September 26, 2008

ಚೆಲುವು ಶಾಶ್ವತವಲ್ಲ

ಯಾವುದಾದರೊಂದು ನೆಪದಿಂದ ಹಳೆಯ ಕವಿತೆಗಳು ನೆನಪಾಗುತ್ತಲೇ ಇರುತ್ತವೆ. ಅಂತದೇ ಒಂದು ಕವಿತೆ ಇಲ್ಲಿದೆ. ಸುಮಾರು ಎಂಟು ಹತ್ತು ವರ್ಷಗಳ ಹಿಂದೆ ನಾನು ಬರೆದಿದ್ದ ಕವಿತೆ. ಮೊನ್ನೆ ಯಾಕೋ ನೆನಪಾಯ್ತು . ಕವಿತೆಯಲ್ಲಿನ ಪದಗಳು ಬಾಲಿಶವೆನಿಸಿದರೂ ಅದರ ಉದ್ದೇಶ ಮಾತ್ರ ಗಟ್ಟಿಯಾದುದು ಅನ್ನಿಸಿತು. ಇಲ್ಲಿ "ಚೆಲುವು" ಅನ್ನುವ ಪದ ಕವಿತೆಯಲ್ಲಿ ಒಂದು ಉದಾಹರಣೆಯಷ್ಟೇ . ಕವಿತೆಯ ಉದ್ದೇಶ ಚೆಲುವಿಗಷ್ಟೇ ಅಲ್ಲದೆ ಯಶಸ್ಸು , ಕೀರ್ತಿ , ಹಣ ಎಲ್ಲದಕ್ಕೂ ಅನ್ವಯ . ಯಾವುದೇ ಸ್ಥಾನದಲ್ಲಿದ್ದರೂ ನಾನೇ ದೊಡ್ಡವನು ನಾನೇ ಎಲ್ಲವನ್ನೂ ಸಾಧಿಸಿದವನು ಎಂಬ ಅಹಮಿಕೆ ಇರಬಾರದು ಎನ್ನುವುದು ನನ್ನ ತತ್ವ. ಕವಿತೆಯ ಬಗ್ಗೆ ಇನ್ನಷ್ಟು ಹೇಳುವ ಮನಸ್ಸಿತ್ತು. ಆದರೆ ಮಂತ್ರಕ್ಕಿಂತ ಉಗುಳು ಜಾಸ್ತಿ ಆಗಬಾರದು :) , ಮುನ್ನುಡಿಯೇ ಉದ್ದವಾಗಿ ಕವಿತೆ ಕಳೆದು ಹೋಗಬಾರದು . ಅದಕ್ಕೇ ಇಷ್ಟು ಸಾಕು.

ಕವಿತೆ ಇಲ್ಲಿದೆ, ಬಾಲಿಶವಾಗಿದ್ದರೂ ತಿದ್ದದೇ ಅಂದು ಹೇಗೆ ಬರೆದಿಟ್ಟಿದ್ದೇನೋ ಅದನ್ನೇ ಇಲ್ಲಿಟ್ಟಿದ್ದೇನೆ.

ಚಂದದಾ ತೋಟದಲಿ ಚೆಂಗುಲಾಬಿಯ ಗಿಡದಿ
ಪುಟ್ಟಗುಲಾಬಿಯ ಮೊಗ್ಗಾಗಿ ನಾ ನಗುತಲಿದ್ದೆ
ನನಗರಿಯದೆ ನನ್ನ ಚೆಲುವಿಗೆ ನಾ ಬೀಗುತಿದ್ದೆ
ಇಂದಲ್ಲ ನಾಳೆ ಹೂವಾಗರಳುವೆನೆಂಬ ಗರ್ವದಲ್ಲಿದ್ದೆ

ಹುಣ್ಣಿಮೆಯ ಚಂದ್ರನು ಬಾನಲ್ಲೇ ಕರಗಿರಲು
ಬಂದೆ ಬಂದನು ರವಿಯು ಬಾನಿನೇರಿಯಲ್ಲಿ
ಇಬ್ಬನಿಯ ಕಣಗಳು ನನ್ನ ಮೇಲೆರಗಲು
ಕಣ್ಣ ತೆರೆದಾಗ ನಾನು ಅರೆಬಿರಿದ ಹೂವಾಗಿದ್ದೆ ಗಿಡದಲ್ಲಿ

ಚೆಲುವೆಯೊಬ್ಬಳು ನನ್ನ ಬಳಿಯಲ್ಲಿ ಬಂದು
ನನ್ನ ಕೊಯ್ಯಲು ಕೈಚಾಚಿದಳು ಮುಂದು
ಸಂತಸದಿ ಮನದಲ್ಲೇ ನಲಿನಲಿದೆ
ನಾ ಚೆಲುವೆಯ ಮುಡಿ ಸೇರುವೆನೆಂದು.

ಚೆಲುವೆಯ ಮುಡಿಯಲ್ಲಿ ಕಂಗೊಳಿಸುವಾಗ
ನಾ ತಿರುಗಿ ನೋಡಿದೆನೊಮ್ಮೆ
ಬಾಡಿ ಮುದುಡಿದ ನನ್ನ ಹೋಲದ
ಒಣಗಿದ ಹಳೆ ಹೂಗಳೆಡೆಗೆ ಗರ್ವಭಾವದಿ.

ಸಂಜೆ ತಾನೋಡಿ ಬಂದಂತೆಲ್ಲ
ಹೊತ್ತು ತಂತಾನೆ ಜಾರಿದಂತೆಲ್ಲ
ಮುಡಿಯೇರಿ ಕುಳಿತ ನಾ ಬಾಡತೊ
ಗಿದ್ದೆ
ನನಗರಿವಿಲ್ಲದೆಯೇ ನಾ ಬಾಡತೊ
ಗಿದ್ದೆ

ಕಿತ್ತು ಬಿಸುಟಿದಳಾಗ ಚೆಲುವೆ
ನನ್ನನ್ನು ಮುಡಿಯಿಂದ
ಕಾಲು ಕಸವಾಗಿ ಬಿದ್ದಿದ್ದೆ ಕ್ಷಣದಲ್ಲೇ
ಸೋತಭಾವದಿ ಬಿದ್ದಿದ್ದೆ ನಾನಲ್ಲೇ

ಕನಸಿನಿಂದ ವಾಸ್ತವಕೆ ಬಂದೆ ನಾನಾಗ
ಕಿವಿಯಲ್ಲಿ ಪಿಸುಗುಟ್ಟಿದಂತಾಗಿ
ಚೆಲುವು ಶಾಶ್ವತವಲ್ಲ ಹುಡುಗಿ ಚೆಲುವು ಶಾಶ್ವತವಲ್ಲ
ತಿಳಿದಿರು ನೀ, ಎಂದೂ ಚೆಲುವು ಶಾಶ್ವತವಲ್ಲ

Thursday, September 4, 2008

ಭಾವಕ್ಕೆ ಬಳಿದ ಬಣ್ಣಗಳೊಡನೆ ಕಳೆದು ಹೋದವಳು

ಕಾಮನಬಿಲ್ಲಿಗೇಕೆ ಏಳೇ ಬಣ್ಣ?
ನನ್ನ ಭಾವಕ್ಕೆ ಬಳಿದಿರುವುದು ನೂರಾರು ಬಣ್ಣ..

ನನಗೆ ಬಣ್ಣಗಳೆಡೆಗೆ ಒಲವು ಜಾಸ್ತಿ. ಒಂದೊಂದು ಬಣ್ಣವನ್ನೂ ಒಂದೊಂದು ರೀತಿಯಲ್ಲಿ ಮೆಚ್ಚುತ್ತೇನೆ , ಒಂದೊಂದು ಬಣ್ಣಕ್ಕೂ ಒಂದೊಂದು ವಿಶೇಷತೆ.ನನ್ನ ದೃಷ್ಟಿಗೆ ಬಣ್ಣದ ಸೆಳೆತ ಜಾಸ್ತಿ. ನನ್ನ ಉಡುಗೆಯಲ್ಲೂ ಬಣ್ಣಕ್ಕೆ ಪ್ರಾಮುಖ್ಯತೆ . ದೃಷ್ಟಿಗೆ ಏನೊಂದು ಗೋಚರಿಸಿದರೂ ಅದರ ಬಣ್ಣ ಮೊದಲು ನನ್ನ ಸೆಳೆಯುತ್ತದೆ. ಬಣ್ಣಗಳೆಡೆಗಿನ ನನ್ನ ಅವಲೋಕನ ವೈಜ್ಞಾನಿಕ ಕುತೂಹಲವೇನಲ್ಲ , ನನ್ನ ಭಾವಕ್ಕೆ ನಾ ಬಳಿಯುವ ಬಣ್ಣಕ್ಕೆ 'ಕುಂಚ' ನನ್ನ ಅವಲೋಕನ.

ಚಿಕ್ಕ ಚಿಕ್ಕ ಹುಲ್ಲುಗಳ ತಿಳಿ ಹಸಿರು, ಒಣಗಿದ ಜಡ್ಡಿನ ಅರೆ ಬಣ್ಣ, ಪೈರಿನ ಪಚ್ಚೆ ಹಸಿರು, ಮರ ಗಿಡಗಳ ಅಚ್ಚ ಹಸಿರು, ಮಣ್ಣಿನ ಬಣ್ಣ, ಧೂಳಿನ ತಿಳಿ ಬಣ್ಣ, ಕೆಸರಿನ ಕೆಂಬಣ್ಣ , ಬಾನು ಹೊದ್ದ ನೀಲಿ ಬಣ್ಣ, ಮುಂಜಾವಿನ ಬಾನ ಹೊಂಬಣ್ಣ , ರವಿಕಿರಣದ ಕಾಂತಿ ಬಣ್ಣ, ಆಗಸದಿ ತೇಲುವ ಬೆಳ್ಮುಗಿಲ ಬಣ್ಣ, ಕಾರ್ಮೋಡದ ಕರಿ ಬಣ್ಣ, ಮಳೆಗಾಳದಲಾಗೊಮ್ಮೆ ಈಗೊಮ್ಮೆ ಇಣುಕುವ ತಿಳಿಬಿಸಿಲ ಬಣ್ಣ, ನಡುಹಗಲಿನ ಸುಡುಬಿಸಿಲ ಬಣ್ಣ, ಇಳಿಸಂಜೆಯ ಬಾನ ಕಿತ್ತಳೆ ಬಣ್ಣ, ಚುಕ್ಕಿ ಚಿತ್ತಾರವಾದ ಬಾನ ಬಣ್ಣ, ಕಾನ ಕತ್ತಲೆಯಲ್ಲೂ ಬೆಳಕು ಸುರಿಸುವ ಶಶಿಯ ಬೆಳದಿಂಗಳ ಬಣ್ಣ, ಕಡಲ ಆ ನೀಲಿ ಬಣ್ಣ, ತೀರದ ಆ ಮರಳಿನ ಬಣ್ಣ,ಗಿರಿ ಶ್ರೇಣಿಯು ಹೊದ್ದ ಹಿಮದ ಬೆಳ್ಳಿ ಬಣ್ಣ,
ಕಂದನ ಹಾಲ್ಗಲ್ಲದ ಬಣ್ಣ, ಪುಟಾಣಿ ಪಾದದ ಗುಲಾಬಿ ಬಣ್ಣ, ನೊರೆ ಹಾಲ ಬಿಳುಪು ಬಣ್ಣ, ಹಾಲ್ಗೆನೆಯ ಆ ಬಣ್ಣ, ಹಬೆಯಾಡುವ ನೊರೆ ಕಾಫಿಯ ಬಣ್ಣ, ಒಲೆಯ ಒಡಲಿನ ಬೆಂಕಿ ಬಣ್ಣ, ಬೂದಿ ಮುಚ್ಚಿದ ಕೆಂಡದ ಬಣ್ಣ, ಹೊಗೆಯ ಬಣ್ಣ, ಸಂಜೆ ನಸುಗತ್ತಲ ಬಣ್ಣ, ದೇವರೊಳದ ದೀಪದ ಬಣ್ಣ, ಬಣ್ಣಗಳನ್ನೇ ಬದಲಾಯಿಸುವ ಅದೇ ಆ ನನ್ನ ಪ್ರೀತಿಯ ರಸ್ತೆಯಲ್ಲಿರುವ ಸೋಡಿಯಮ್ ದೀಪದ ಬಣ್ಣ, ಜಡಿ ಮಳೆಯ ಹನಿಗಳ ಬಣ್ಣ, ಜುಳು ಜುಳು ಹರಿವ ನೀರಿನ ಬಣ್ಣ, ನಿಂತ ನೀರಿನ ಕೆರೆಯ ತಿಳಿ ಹಸಿರು ಬಣ್ಣ, ಅಮ್ಮನ ಸೀರೆಯ ಬಣ್ಣ, ಇರುವೆಗಳ ಬಣ್ಣ, ಹರಿವ ಹುಳಗಳ ಅದೆಷ್ಟೋ ಬಣ್ಣ,ಮಿಂಚುಳದ ಮಿಣುಕು ಮಿಣುಕು ಹೊಂಬಣ್ಣ , ಆಗಸದಿ ಮಿಂಚುವ ಮಿಂಚಿನ ಬಣ್ಣ, ಚಿಲಿಪಿಲಿ ಹಕ್ಕಿಗಳ ಹಲವು ಬಣ್ಣ, ಅಂಗಳದ ತುಳಸಿಯ ಬಣ್ಣ,ರಂಗೋಲಿ ನಗುವ ಸಗಣಿ ತೀಡಿದ ಅಂಗಳದ ಬಣ್ಣ,ಕೊಟ್ಟಿಗೆಯ 'ಕೆಂಪಿ' ಕರುವಿನ ಬಣ್ಣ, ಅವಳ ಬಳೆಗಳ ಬಣ್ಣ, ಕೆನ್ನೆಯರಿಷಿನ, ಹಣೆಯ ಕುಂಕುಮದ ಬಣ್ಣ, ಕಣ್ಣ ಕಾಡಿಗೆಯ ಬಣ್ಣ, ಹಸ್ತಗಳ ಅಂದಗೊಳಿಸುವ ಮದರಂಗಿ ಬಣ್ಣ , ಅವನ ಕಂಗಳ ಹೊಳಪು ಬಣ್ಣ, ನಗುವ ಹೂಗಳ ಬಣ್ಣ ಬಣ್ಣ, ಚುಮುಚುಮು ಚಳಿಯ ಬೆಳಗಿನ ಇಬ್ಬನಿಯ ಬಣ್ಣ,ಸವಿ ಜೇನ ಬಣ್ಣ, ಅಬ್ಬ ಅದೆಷ್ಟು ಬಣ್ಣಗಳು, ಇವೆಲ್ಲವೂ ನಂಗಿಷ್ಟ.

ಕಾಣದೆಯೂ ಕಾಣುವ ಬಣ್ಣಗಳಿವೆಯಲ್ಲ ,ಅವೂ ನಂಗಿಷ್ಟ. 'ಹೊಂಗನಸು' ಕನಸಿಗೆ ಹೊನ್ನಿನ ಬಣ್ಣವೇ ? "ಬಣ್ಣ ಬಣ್ಣದ ಕನಸು"! ಕನಸಿನ ಎಲ್ಲ ಬಣ್ಣಗಳೂ ನಂಗಿಷ್ಟ, ಮನಸ್ಸಿನ ಹಾಲು ಬಣ್ಣವಿಷ್ಟ . "ನೆನಪು ಹಚ್ಚ ಹಸಿರು " ನೆನಪಿಗೆ ಹಸಿರು ಬಣ್ಣವೇ? ಮರೆವಿಗಾವ ಬಣ್ಣ? ನೆನಪಿನ ಬಣ್ಣಕ್ಕೂ ಒಂಥರಾ ಚೆಲುವಿದೆ. ನೆನಪಿನ ಬಣ್ಣ ಬಲು ಗಾಢ.ಮರೆವಿನ ಬಣ್ಣ ಸ್ವಲ್ಪ ಪೇಲವ. ಅದಕ್ಕೂ ಒಂದು ಸೊಗಸಿದೆ.

ಇನ್ನೆಷ್ಟು ಬಣ್ಣಗಳನ್ನು ಹೇಳಲಿ ? ನೋಡುವ ಪ್ರತಿಯೊಂದಕ್ಕೂ ಬಣ್ಣವಿದೆ , ಚೆಲುವಿದೆ.

ಎಲ್ಲ ಬಣ್ಣಗಳು ಕಲೆತಾಗ ಕಾಣುವ ಸೌಂದರ್ಯಕ್ಕೆ ಎಲ್ಲೆಯುಂಟೆ? ಹೂವಿನ ದಳದ ಮೇಲೋ, ಚಿಗುರೆಲೆಯ ಮೇಲೋ, ಹುಲ್ಲಿನೆಳೆಯ ಮೆಲೋ ಬಿದ್ದ ಹನಿಯೊಡನೆ ರವಿಕಿರಣದ ಹೊಂಬಣ್ಣ ಬೆರೆತಾಗ ಕಾಣುವ ಬಣ್ಣ ಬಣ್ಣವಿದೆಯಲ್ಲ ಆಹಾ ! ಅದು ನನಗೆ ತುಂಬ ಇಷ್ಟ .ಆ ಬಣ್ಣ ಬಣ್ಣದ ಹನಿಯೊಳಗೆ ಬೇರೆಯದೇ ಒಂದು ಲೋಕವಿದೆಯೇನೋ ಅನ್ನಿಸಿಬಿಡುತ್ತದೆ ನನಗೆ. ನೀರ ಹನಿ ಬೆಳಕಿನ ಎಳೆಯೊಡನೆ ಕಲೆತಾಗ ಮೂಡುವ ಈ ಚೆಲುವಿಗೂ ನಾನಾ ಪರಿಯಿದೆ, ಮುಂಜಾನೆಯ ಹನಿಗಳ ಚೆಲುವೇ ಬೇರೆ, ಮುಸ್ಸಂಜೆಯ ಹನಿಗಳ ಚೆಲುವೇ ಬೇರೆ. ಚಳಿಯ ಬೆಳಗಿನಲ್ಲಿ ಜೇಡನ ಬಲೆಗಂಟಿದ ಇಬ್ಬನಿಯ ಹನಿಗಳಿಗೆ ಬೆಳಕಿನೆಳೆ ಸೋಕಿದಾಗ ಕಾಣುವ ಬಣ್ಣದ ಚೆಲುವು ನೋಡಲು ಬಲು ಸೊಗಸು.

ಆದರೆ ನಾ ಇಷ್ಟೆಲ್ಲಾ ಬರೆಯಲು ಕಾರಣ ಬೇರೆಯದೇ ಇದೆ. ಅದು ಗುಳ್ಳೆಗಳ ಮೇಲಣ ಬಣ್ಣದ ಚೆಲುವು. ಬಣ್ಣವಿಲ್ಲದ ಗುಳ್ಳೆಗಳು ಬೆಳಕಿನ ಹೊಳಪ ಸೆಳೆದು ಬಣ್ಣ ಬಣ್ಣವಾಗಿ ಹಾರುವಾಗ ನನ್ನ ಮನಸ್ಸೂ ಗುಳ್ಳೆಗಳಂತೆ ಹಗುರಾಗಿ ತೇಲಿ ಹೋಗುತ್ತದೆ. ನನ್ನ ನೆನಪುಗಳ ಬಣ್ಣದಲ್ಲಿ ಒಂದು ಚಿತ್ರವಿದೆ. ನಾನು ಪುಟ್ಟ ಹುಡುಗಿಯಾಗಿದ್ದಾಗ ಗುಳ್ಳೆಗಳೊಡನೆ ಆಡುತ್ತಿದ್ದುದು. ಅಜ್ಜನ ಮನೆಯ ಎದುರು ಬೇಲಿ ಸಾಲಿನ ಕಳ್ಳಿಗಿಡದ ದಂಟು ಮುರಿದರೆ ಸೋರುತ್ತಿದ್ದ ಕಳ್ಳಿರಸವನ್ನು
ಊದಿದರೆ ಸಾಕು ಬೇರೆ ಬೇರೆ ಗಾತ್ರದ ಅವೆಷ್ಟೋ ಗುಳ್ಳೆಗಳು ನಮ್ಮನ್ನು ಸುತ್ತುವರಿಯುತ್ತಿದ್ದವು. ಒಂದೊಂದು ಗುಳ್ಳೆಗಳಲ್ಲೂ ಅದೆಷ್ಟೋ ಬಣ್ಣಗಳು. ಎಷ್ಟು ಸುಂದರ. ಆ ಆಟ ನನಗೆಂದೂ ಬೇಸರ ತರಿಸುತ್ತಿರಲಿಲ್ಲ.ಪಕ್ಕದ ಮೆನೆಯ ಬೇಲಿಯಲ್ಲಿ ಇನ್ನೊಂದು ಗಿಡವಿತ್ತು, ಏನು ಹೆಸರೋ ತಿಳಿಯದು. ಅದರ ಎಲೆಯನ್ನು ಅರ್ಧರ್ಧವಾಗಿ ಮುರಿದರೆ ಪಟ್ ಎಂದು ಶಬ್ದ ಬರುತ್ತಿತ್ತು, ಆಮೇಲೆ ಮೆಲ್ಲಗೆ ಅದನ್ನು ಒತ್ತಿ ಹಿಡಿದು ಬಿಡಿಸಿದರೆ ಗುಳ್ಳೆಯ ತೆಳು ಪದರು, ತೆಳು ಕನ್ನಡಿಯಂತೆ ಕಾಣುತ್ತಿತ್ತು , ಅದರಲ್ಲೂ ಅಷ್ಟೇ ಹಲವು ಬಣ್ಣಗಳು. ಅದನ್ನು ನೋಡುತ್ತಿದ್ದ ಖುಷಿಯನ್ನು ಇವತ್ತಿಗೂ ನನ್ನ ನೆನಪಿನ ಬುಟ್ಟಿಯಲ್ಲಿ ಚಂದವಾಗಿ ಕಟ್ಟಿಟ್ಟಿದ್ದೇನೆ.

ಹೋದವರ್ಷ ಅಜ್ಜನ ಮನೆಗೆ ಹೋಗಿದ್ದಾಗ ಮುಸ್ಸಂಜೆ ಹೊತ್ತಲ್ಲಿ ದೇವಸ್ಥಾನಕ್ಕೆ ಹೋಗಿದ್ದೆವು. ದೇವರ ದರ್ಶನವಾದ ನಂತರ ಅಲ್ಲೇ ಕಟ್ಟೆಯ ಮೇಲೆ ಮಾತಾಡುತ್ತ ಕುಳಿತಿದ್ದಾಗ ಆಚೆ ಮೂಲೆಯಲ್ಲೆಲ್ಲೊ ಕಳ್ಳಿ ಗಿಡದ ಹಿಂಡು ಕಾಣಿಸಿತು. ನನಗಂತೂ ಬಾಲ್ಯ ಮರುಕಳಿಸಿದಂತಾಗಿ ಕಟ್ಟೆಯಿಂದ ಜಿಗಿದು ಹೋಗಿ ಕಳ್ಳಿ ಎಲೆ ಮುರಿದು ಗುಳ್ಳೆಗಳನ್ನು ಊದಿದೆ. ಅಕ್ಕನೂ ಜೊತೆಯಾದಳು.
ಅದೆಷ್ಟೋ ಹೊತ್ತು ಇಬ್ಬರೂ ಕಾಲವನ್ನೇ ಮರೆತವರಂತೆ ನೂರಾರು ಗುಳ್ಳೆಗಳನ್ನು ಗಾಳಿಗೆ ತೇಲಿ ಬಿಟ್ಟು ಬಣ್ಣಗಳನ್ನು ಕಣ್ತುಂಬಿಕೊಂಡು ಆನಂದಿಸಿದೆವು. ಬೀಸಿಬರುತ್ತಿದ್ದ ತಿಳಿಗಾಳಿಗೆ ಸುತ್ತಲಿದ್ದ ಗದ್ದೆಯ ಹಸಿರುಪೈರುಗಳು ತಲೆದೂಗುತ್ತಿದ್ದಿದ್ದು ನಮ್ಮ ನಲಿವಿಗೆ ಅವೂ ಸಾಥಿ ನೀಡಿದಂತಿತ್ತು. ಭಾವಕ್ಕೆ ಮತ್ತಷ್ಟು ಬಣ್ಣ ಬಳಿದಂತಾಗಿ ಮನಸ್ಸು ಅದೆಲ್ಲೋ ಕಳೆದುಹೋಗಿತ್ತು .

Sunday, August 31, 2008

ಹನಿಗಳು

ನಿದ್ದೆ ಬಾರದ ರಾತ್ರಿ
ತೆರೆದ ಕಂಗಳು ಅಂದು
ಕಂಡಿದ್ದ ಕನಸುಗಳು
ಇಂದು ರಾತ್ರಿಯಾಗಸದಲ್ಲಿ
ಹೊಳೆಯುತ್ತಿವೆ ತಾರೆಗಳಾಗಿ.

******

ನಕ್ಷತ್ರಗಳನ್ನು ಎಣಿಸಿ ಎಣಿಸಿ
ಸೋತ ಕಣ್ಣುಗಳು
ನಿನ್ನ ಕಣ್ಣುಗಳನ್ನು ಸಂಧಿಸಿದಾಗ
ಹಕ್ಕಿ ಗರಿಯಷ್ಟು ಹಗುರವಾದ
ನಿನ್ನ ಪ್ರೀತಿಯ ನೋಟವೂ
ಭಾರವೆನಿಸಿ ಮುಚ್ಚಿಕೊಂಡಾಗ
ಉದುರಿದ ಹನಿಯು
ನಿನ್ನ ಬೊಗಸೆಯ ಸ್ಪರ್ಶದಲ್ಲಿ
ಮುತ್ತಾಯಿತು.

******

ಸಂಜೆ ಬಾನ ಸೆರಗಿನಂಚಿನಲಿ ಚುಕ್ಕಿಗಳ ಚಿತ್ತಾರ,
ಮುಂಗುರುಳ ನೇವರಿಸುವ ನೆಪದಿ ಬೀಸಿ ಬಂದ ತಿಳಿಗಾಳಿ,
ಹಾರಿ ಹೋದ ಬೆಳ್ಳಕ್ಕಿ ಹಿಂಡು,
ಬೇಲಿ ಸಾಲಿನ ಆ ನೀಲಿ ಹೂವು ನಕ್ಕ ಪರಿಯು
ನಿನ್ನ ನೆನಪ ತಾರದಿರಲು ಸಾಧ್ಯವೇ?

Wednesday, August 27, 2008

ನಾ ಹಿಡಿಯದ ಹಾದಿ
















ಅಲ್ಲೊಂದು ದಾರಿ
ದಾರಿಯ ಹಿಡಿದು ಸಾಗುವುದು ಎನಗೊಳಿತೆ?
ಅರಿವಿರಲಿಲ್ಲವೆನಗೆ.
ಕಲ್ಲಿರಬಹುದು ಮುಳ್ಳಿರಬಹುದು
ಕಷ್ಟ ಕೋಟಲೆಗಳೆದುರುಗೊಳ್ಳಬಹುದು
ಸುಮ್ಮನೇಕೆ ಇಲ್ಲದ ಉಸಾಬರಿ ಎನಗೆ?
ಮರುಯೋಚನೆಯಿಲ್ಲದೆ ನಡೆದೆ ನನ್ನ ದಾರಿಯಲ್ಲೇ ನಾ.

ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ದಾರಿಯ ಕಂಡಾಗೆಲ್ಲ ತಿರು ತಿರುಗಿ ನೋಡುವ ಹುಚ್ಚು
ಹಿಡಿದು ಸಾಗಲೇ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನೂರಾರು ಪ್ರಶ್ನೆಗಳು ಮನದಲ್ಲಿ ಸುಳಿದು
ನನ್ನದೇ ಯೋಚನೆಗೆ ನನ್ನ ಸಮ್ಮತವಿಲ್ಲದೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.

ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಹೊರಳಿತು ಹಿಡಿಯದ ಹಾದಿಯ ಕಡೆಗೆ.
ತಿರು ತಿರುಗಿ ನೋಡಿದಾಗ
ಕಲಾವಿದನ ಕುಂಚದಲ್ಲರಳಿದ ಕಲೆಯ ಚೆಲುವು
ಕಲ್ಪನೆಯಲಿ ಹುಟ್ಟಿ
ಹೂವು ಹಾಸಿದ ನೆಲವಾಗಿರಬಹುದು
ಹಿಡಿದು ಸಾಗಲೇ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನನ್ನ ದಾರಿಯ ನೆನಪಾಗೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.

ಮನಸು ಕಮಲದೆಲೆಯ ಮೇಲಣ ನೀರ ಹನಿ
ಇಂದು ನಡೆದುಬಿಡಬೇಕು ಹಿಡಿಯದ ಹಾದಿಯಲಿ
ಅನ್ನಿಸಿದೊಡನೆಯೇ ಹೊರಟು ನಿಂತೆ.
ಹಾದಿಗೆದುರಾಗಿ ನಿಂತು ನೋಡಲು
ಅಂದು ಬೇಲಿ ಹಾಕಿದೆ ಹಾದಿಗೆ.
ಮತ್ತೆ ಮರಳುವ ಮನಸಿಲ್ಲವಾದರೂ
ನಡೆಯಲೇಬೇಕಿತ್ತು ಮರಳಿ ನನ್ನದೇ ಹಳೆಯ ದಾರಿಯಲಿ ನಾ.

ಬಿಟ್ಟರೂ ಬಿಡದೆನ್ನುವ ಮೋಹ
ಹಿಡಿಯದ ಹಾದಿಯೆಡೆಗೆ
"ಬೇಲಿ ಹಾರಿದರೆ ಸಾಗಬಹುದಲ್ಲ" ಕೂಗಿ ಹೇಳಿತು ಮನವು.
ನನ್ನನಾವರಿಸಿದ ನೂರು ಪ್ರಶ್ನೆಗಳು ಕರಗಿ
ಮನವು ಹಗುರಾಗಿ
ಹೊರಟು ನಿಂತೆನು ಮತ್ತೆ
ಹಿಡಿಯದ ಹಾದಿಯಲಿ ಸಾಗಲನುವಾಗಿ.

ಹಾದಿಯೆದುರಲಿ ಬಂದು ನಿಂತು ಹೆಜ್ಜೆ ಮುಂದಿಡುತಿರಲು
ಸುತ್ತ ನೋಡಿದರೆ ಸುತ್ತುವರಿದಾ ಜನರು
ಅತ್ತ ಹೋಗಲು ಬಿಡದೆ ಎಳೆಯುತಿದ್ದರು ನನ್ನ
ಎಡಕೊಮ್ಮೆ ಬಲಕೊಮ್ಮೆ .
ನನ್ನ ಕೂಗು ಮೂಕವಾಯಿತು
ಹೆಜ್ಜೆ ಕುರುಡಾಯಿತು
ಯಾರದೋ ಹೆಜ್ಜೆ ಸಾಗಿದೆಡೆ ನನ್ನದೂ ಹೆಜ್ಜೆ ಸಾಗಿ
ಪಯಣ ಆರಂಭವಾಯಿತು ಮತ್ತದೇ ಹಳೆಯ ದಾರಿಯಲಿ.

ಎಂದೂ ಹಿಡಿಯದ ಹಾದಿಗೆ ಬೆನ್ನು ತಿರುಗಿಸಿ ನಾ ಹೊರಟೆ
ಹಾದಿ ನಾ ಹಿಡಿಯದ ಹಾದಿಯಾಗಿಯೇ ಉಳಿದುಹೊಯ್ತು.

Friday, August 22, 2008

ಮುಸ್ಸಂಜೆಯ ನೆನಪು

ಮಣ್ಣ ಹಣತೆಯ ಎಣ್ಣೆ ಬತ್ತಿಯ
ಪುಟ್ಟ ದೀಪಕ್ಕೆ
ಮುಸ್ಸಂಜೆಯ ನೆನಪು
ಬಾ ಎಂದು ಕರೆಯುತಲಿತ್ತು ಮುಸ್ಸಂಜೆಯನು
ಬಾನಲ್ಲಿ ರವಿ ಜಾರುವ ಮುನ್ನವೇ.
ಮುಸ್ಸಂಜೆಯ ಮಬ್ಬುಗತ್ತಲಿಗೋ
ದೀಪವೆಂದರೆ ಒಲವು
ತನ್ನನಾವರಿಸಿ ಬೆಳಗು ನೀಡುವುದು ದೀಪ ತಾನೆ?
ಕಾಯುವಿಕೆಯು ಕೊನೆಗೊಂಡು
ಹೊತ್ತು ಕಂತು ಮಬ್ಬು ಕವಿದಾ ವೇಳೆ
ದೀಪ ನಂದಿತು ಏಕೆ?
ದೀಪಕ್ಕೆ ಮುಸ್ಸಂಜೆಯ ನೆನಪು
ಬರಿಯ ನೆಪವಷ್ಟೆಯೇನು?

[ಅವತ್ತು ಯಾವತ್ತೋ ಒಂದು ದಿನ ಮನಸಲ್ಲಿ ಮೂಡಿದ ಸಾಲುಗಳು. ಇವಿಷ್ಟೇ ಬರ್ದಿದ್ದು ಅಥವಾ ಮುಂದೆ ಬರಿಯಬೇಕು ಅನ್ನಿಸಲಿಲ್ಲ . ಅಪೂರ್ಣವಾದ ಕವಿತೆ?!! ]

Wednesday, August 6, 2008

ಅವಳು ರಾಧೆಯಲ್ಲ

"ಕೃಷ್ಣ"
ಅವಳಿಗೆ , ಆ ಒಂಭತ್ತರ ಬಾಲೆಗೆ ಕೃಷ್ಣನೆಂದರೆ ಸಾಕು ಕಣ್ಣರಳುವುದು. ಕೃಷ್ಣ ಅವಳ ಆತ್ಮ , ಕೃಷ್ಣ ಅವಳ ನಗು, ಕೃಷ್ಣ ಅವಳ ಖುಷಿ. ಅವಳಿಗೆ ಏಕಾಂತವೆಂದರೆ ಏನೆಂದು ತಿಳಿಯದು , ಏಕೆಂದರೆ ಅವಳ ಏಕಾಂತದಲ್ಲೂ ಕೃಷ್ಣನಿರುವನು ಅವಳ ಜೊತೆಗೆ. ಕೃಷ್ಣ ಅವಳ ಮಾನಸ ಮಿತ್ರ. ಅವಳ ಖುಷಿ, ನಗು, ದುಃಖ , ಅಳು ಎಲ್ಲದರಲ್ಲಿ ಇರುವುದು ಕೃಷ್ಣನೇ. ಖುಷಿಯಾದಾಗ ಕೃಷ್ಣನೊಡನೆ ಮಾತನಾಡುವಳು ತನ್ನೊಳಗೇ. ದುಃಖವಾದಾಗಲೂ ನೆನೆವುದು ಕೃಷ್ಣನನ್ನೇ , ಯಾಕೆ ಹೀಗೆ ಎಂದು ಕೇಳುವಳು ಅವನನ್ನೇ .

ಕೃಷ್ಣನ ಪೂಜಿಸಿ ಹಬ್ಬ ಮಾಡಲು ಅವಳಿಗೆ ಕೃಷ್ಣಾಷ್ಟಮಿಯೇ ಆಗಬೇಕಿಲ್ಲ . ಅವಳಿಗೆ ಅನ್ನಿಸಿದಾಗಲೆಲ್ಲ ಕೃಷ್ಣನನು ಪೂಜಿಸುವ ಸಂಭ್ರಮ . ಅವಳ ಆ ಕೃಷ್ಣನ ವಿಗ್ರಹಕ್ಕೆ ಸಡಗರದ ಪೂಜೆ. ವಿಗ್ರಹ ! ಅದೆಂಥ ದಿವ್ಯ ಕಳೆಯಿರುವ ಕೃಷ್ಣನ ವಿಗ್ರಹ. ಅವಳು ಐದರ ಬಾಲೆಯಾಗಿದ್ದಾಗ ಅಜ್ಜ ತಂದುಕೊಟ್ಟಿದ್ದು. ಆಗಿನಿಂದ ಅವಳಿಗೆ ಆ ವಿಗ್ರಹದ ಮೇಲೆ ಅದೇನೋ ಮೋಹ. ಅವಳಿಗೆ ಅದು ಬರಿಯ ವಿಗ್ರಹವಲ್ಲ . ಅದು ಕೃಷ್ಣನೆಂದೇ ಅವಳ ನಂಬಿಕೆ . ಆ ವಿಗ್ರಹ ಜೊತೆಯಿದ್ದರೆ ಕೃಷ್ಣನೇ ಜೊತೆಯಿರುವನೆಂಬ ಭಾವ.
ಮಕ್ಕೆಳೆಲ್ಲ ಅದರೊಟ್ಟಿಗೆ ಆಡುವಾಗ ತನಗೆ ಅದರ ಮೇಲೆ ಜಾಸ್ತಿ ಅಧಿಕಾರವಿದೆ ಎಂದು ತನ್ನಷ್ಟಕ್ಕೆ ತಾನು ಅಂದುಕೊಳ್ಳುವಳು.

ಶಾಲೆಗೆ ರಜೆ ಬಂದರೆ ಸಾಕು ಪುಟ್ಟ ಮಂಟಪದಲ್ಲಿ ಕೃಷ್ಣನನ್ನಿ
ಟ್ಟು , ಹೂವು ಮಾಲೆ , ಎಲೆಗಳಿಂದ ಸಿಂಗರಿಸುವಳು. ಎಲ್ಲರೊಟ್ಟಿಗೆ ಹಾಡಿ ಪಾಡಿ ನಲಿಯುವಳು. ಮಕ್ಕಳ ಆಟವಾ ಅದು? ನೋಡುವವರ ಕಣ್ಣಿಗೆ ಹಬ್ಬ!

ಅವಳ ಮುಗ್ಧ ಮನಸಿನಲ್ಲಿ ಕೃಷ್ಣನದೊಂದು ಪುಟ್ಟ ಲೋಕ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ , ಕೃಷ್ಣ ತನ್ನ ಆಪ್ತಗೆಳೆಯನೆಂದೇ ಕನಸಲ್ಲೂ ಮನಸಲ್ಲೂ ಕನವರಿಸುವವಳು.

ಅವತ್ತೊಂದು ದಿನ ಬೇಸಿಗೆಯ ಬೆಳಗಿನಲ್ಲಿ ಕೃಷ್ಣನೊಂದಿಗೆ ಆಡಿಕೊಂಡಿದ್ದಳು ಅವಳು. ಬೆಳ್ಬೆಳಿಗ್ಗೆ ಬಂದ ಪುರೋಹಿತರು ಅಜ್ಜನೊಂದಿಗೆ ಏನೋ ಮಾತಾಡುತ್ತಲಿದ್ದರು. ಸಮಯವಾಯಿತೆಂದು ಹೊರಟು ನಿಂತ ಅವರಿಗೆ ಅದೇನೋ ನೆನಪಾಯಿತು. ಮತ್ತೆನಿಂತರು. ಅಲ್ಲೇ ಮುಂದಿನ ಮನೆಯಲ್ಲಿ ಜರುಗುವ ಉಪನಯನ ಕಾರ್ಯಕ್ರಮಕ್ಕೆ ಹೊರಟವರು ಅವರು, ವಟುವಾದ ಹುಡುಗನಿಗೆ ಆಶಿರ್ವಾದಪೂರ್ವಕವಾಗಿ ಏನನ್ನಾದರೂ ಕೊಡುವುದು ಅವರ ವಾಡಿಕೆ . ಈ ಸಾರಿ ಮರೆತು ಬಂದಿದ್ದಾರೆ. "ಏನು ಕೊಡಲಿ ಈಗ ?" ಇವಳ ಅಜ್ಜನನ್ನು ಕೇಳಿದರು. ಅಜ್ಜ ಇನ್ನೂ ಯೋಚನೆಯಲ್ಲಿ ಇರುವಾಗಲೇ ಪುರುಹಿತರ ಕಣ್ಣು ಇವಳು ಆಡಿಕೊಂಡಿದ್ದ ಕೃಷ್ಣನವಿಗ್ರಹದ ಮೇಲೆ ಬಿ
ತ್ತು. "ಈ ವಿಗ್ರಹ ಅವನಿಗೆ ಕೊಡಲು ಲಾಯಕ್ಕಾಗಿದೆ . ಈ ಪುಟ್ಟಿಗೆ ಇನ್ನೊಂದು ದಿನ ಇಂಥದ್ದೇ ತಂದುಕೊಟ್ರೆ ಆಯ್ತು. ಇದನ್ನೇ ಒಯ್ಯುತ್ತೇನೆ . ಆಗಬಹುದೇ? " ಎಂದರು ಅವರು. ಅಜ್ಜನಿಗೋ ಏನು ಹೇಳೋದೆಂದು ತಿಳಿಯದಾಯ್ತು . ಆ ಕೃಷ್ಣನೊಂದಿಗೆ ಅವಳ ನಂಟನ್ನು ಬಲ್ಲವರು ಅವರು. ಅವರು ಏನೋ ಹೇಳುವಷ್ಟರಲ್ಲಿ ಪುರೋಹಿತರು ಅವಳಲ್ಲಿ "ಇಲ್ಲಿ ಕೊಡಮ್ಮಒಮ್ಮೆ ಆ ವಿಗ್ರಹವನ್ನ " ಎನ್ನುತ್ತಾ ಕೈಗೆ ತೆಗೆದುಕೊಂಡರು . "ನಿಂಗೆ ನಿನ್ನ ಅಜ್ಜನ ಕೈಲಿ ಈಥರದ್ದೆ ಇನ್ನೊಂದು ಕೊಡಿಸುವುದಕ್ಕೆ ಹೇಳ್ತೀನಿ . ಈಗ ಇದನ್ನು ನಾನು ಒಯ್ಯುತ್ತೇನೆ ಆಯ್ತಾ " ಅನ್ನುತ್ತಾ ಹೊರಟರು .

ಅವಳ ಹೃದಯಬಡಿತವೇ ನಿಂತಂತಾಯ್ತು . ಅಳು ಒಮ್ಮೆಲೇ ಒತ್ತರಿಸಿಕೊಂಡು ಬಂತು. ಕಣ್ಣುಗಳು ತಂತಾನೇ ಹನಿಗೂಡಿದವು. ನೀರು ತುಂಬಿದ ಕಣ್ಣುಗಳಿಗೆ ಕೊನೆಯಬಾರಿ ಅವಳ ಕೃಷ್ಣ ಅಸ್ಪಷ್ಟವಾಗಿ ಕಂಡನು. " ನನ್ನ ಕೃಷ್ಣ ನನಗೆ ಬೇಕು, ನನಗೆ ಬೇಕು. " ಅವಳು ಅಳುತ್ತ ಓಡಿದಳು. ಆದರೂ ಅವರು ಹೊರಟು ಹೋದರು . ಅವಳ ಅಳು ಅವರಿಗೆ ಕೇಳಿಸಿತಾ ಅಥವಾ ಕೇಳಿಸಲಿಲ್ಲವಾ ? ಅವಳಿಗೆ ಗೊತ್ತಾಗಲಿಲ್ಲ.

ಮತ್ತೊಂದು ಕೃಷ್ಣ ವಿಗ್ರಹವನ್ನು ತಂದುಕೊಡುವೆನೆಂದು ಅಶ್ವಾಸನೆಯಿಡುತ್ತ ಸಮಾಧಾನಿಸಲು ಬಂದ ಅಜ್ಜನ ಮಾತುಗಳು ಅವಳಿಗೆ ರುಚಿಸಲಿಲ್ಲ . ಮನೆಯವರೆಲ್ಲ ಬಂದು ಸಮಾಧಾನ ಮಾಡಿದರೂ ಅವಳ ಅಳು ನಿಲ್ಲಲಿಲ್ಲ . ಅವಳು ಅತ್ತಳು . ಮತ್ತೆ ಮತ್ತೆ ಅತ್ತಳು. ಕೃಷ್ಣ ತನ್ನನ್ನು ಬಿಟ್ಟು ಹೋಗಿದ್ದು ಯಾಕೆಂದು ತಿಳಿಯದೇ ಕಣ್ಣೀರಿಟ್ಟಳು. ಮತ್ತೆ ಮತ್ತೆ ಅವನನ್ನು ಕೇಳಬೇಕು ಅನ್ನಿಸಿತು ದೂರ ಹೋಗಿದ್ದು ಯಾಕೆ ಎಂದು. ಆದರೆ ಹೇಗೆ ಕೇಳುವುದು ದೂರ ಹೋದ ಅವನನ್ನು.

ಕೃಷ್ಣ ಅಮೂರ್ತ ರೂಪ . ಅವನ ಮೂರ್ತಿಯಲ್ಲೇನಿದೆ ? ಕೃಷ್ಣನೆಂಬ ಭಾವ ಆತ್ಮದಲ್ಲಿ ಇದ್ದರೆ ಸಾಕು. ಆದರೆ ಆ ಮುಗ್ಧ ಕಂದನಿಗೆ ಮೂರ್ತ ಅಮೂರ್ತಗಳು ಹೇಗೆ ಅರ್ಥವಾಗಬೇಕು . ಆ ಕೃಷ್ಣನ ವಿಗ್ರಹವೇ ಅವಳ ಆತ್ಮ . ಅವಳ ಆತ್ಮವೇ ಅವಳ ಕೃಷ್ಣ. ಆತ್ಮವೇ ದೂರ ಹೋದರೆ?

ಅದಾದ ಮೇಲೆ ಅವಳ ನಿನ್ನೆ ಇಂದು ನಾಳೆಗಳೆಲ್ಲ ಬರೀ ದೂರವಾದ ಕೃಷ್ಣನ ನೆನೆದು ಚಿಂತಿಸುವದರಲ್ಲೇ ಕಳೆಯಿತು . ಎಲ್ಲಿರಬಹುದು ನನ್ನ ಕೃಷ್ಣ. ಅವರ ಮನೆಯಲ್ಲಿ ಹೊರಗೆ ಕಾಣುವಂತೆ ಇಟ್ಟಿರಬಹುದಾ ? ನೋಡುವ ಆಸೆಯಾಯ್ತು ಅವಳಿಗೆ. ಆಟವಾಡುವ ನೆಪದಲ್ಲಿ ಎದುರು ಮನೆಗೆ ಹೋದಾಗ ಅಲ್ಲೆಲ್ಲಾ ಹುಡುಕಿದಳು ಕೃಷ್ಣನನ್ನು. ಕೃಷ್ಣ ಎಲ್ಲೂ ಕಾಣದೇ ಮತ್ತದೇ ನಿರಾಸೆ ಅವಳ ಪಾಲಿಗೆ.

15 ವರ್ಷಗಳಲ್ಲಿ ಅದೆಷ್ಟೋ ಹಗಲುಗಳು ರಾತ್ರಿಗಳು ಕೃಷ್ಣನ ನೆನಪಲ್ಲೇ ಕಳೆದು ಹೋದವು. ಬೀಸುವ ಗಾಳಿ, ತಂಪಿನ ಮಳೆ ಹನಿ , ಹೂ ಸೂಸುವ ಗಂಧ , ಹಕ್ಕಿಯ ಜೇನ್ದನಿಯ ಇಂಪು ಎಲ್ಲವೂ ಅವಳಿಗೆ ಕೃಷ್ಣನ ನೆನಪನ್ನು ಹೊತ್ತು ತರುವ ಸಂಗಾತಿಗಳು.

ಭಾನುವಾರ ಬೆಳಗ್ಗೆಯಿಂದ ಬಿಟ್ಟೂ ಬಿಡದೇ ಜಿಟಿ ಜಿಟಿ ಹೊಯ್ಯುತ್ತಿರುವ ಮಳೆ ಮಧ್ಯಾಹ್ನವನ್ನೂ ಆವರಿಸಿದ ಹೊತ್ತು, ಮನಸ್ಸೆಲ್ಲ ಬೇಸರವೇ ತುಂಬಿಕೊಂಡು ಕಿಟಕಿಯಿಂದ ಮಳೆ ನೋಡುತ್ತಿರುವಾಗ ಅವಳಿಗೆ ಎಲ್ಲ ನೆನಪಾಗಿ , ಕಣ್ಣಂಚಿನಿಂದ ಹನಿ ಜಾರಿತು. ಮನಸ್ಸಿನಲ್ಲಿ ಕೃಷ್ಣನೇ ಕೃಷ್ಣ ತುಂಬಿಕೊಂಡು ಕಣ್ಣ ಮುಂದೆ ಅವನದೇ , ಅವಳ ಆ ಕೃಷ್ಣನದೇ ರೂಪ ತೇಲಿಬಂತು. ಕಿಟಕಿಯಾಚೆ ಹನಿ ಹನಿಯುತ್ತಿರುವ ಮಳೆ, ಅವಳ ಮನಸಲ್ಲೂ ಅಷ್ಟೆ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ. ಆದರೂ ಅವಳು ಕೃಷ್ಣನ ನೆನಪೇ ಉಸಿರಾಗಿರುವ ಅವನ ಗೆಳತಿ.

Friday, August 1, 2008

ಮೌನದ ಗೆಳತಿ

ಈಗೀಗ ನನ್ನ ಹೆಜ್ಜೆಗಳಿಗೆ ಸದ್ದಿಲ್ಲ
ಘಲು ಘಲು ಎನ್ನುತ್ತಿದ್ದ
ಗೆಜ್ಜೆಗಳಿಗೂ ಯಾಕೋ ಮೌನದ ಮುಸುಕು.
ಕಿಂಕಿಣಿಸುತ್ತಿದ್ದ ಬಳೆಗಳದು
ಮಾತಿಲ್ಲವೀಗ,
ಕಂಗಳೊಳಗೆ ಕನಸುಗಳ ನಗೆಯ
ಕಿಲಕಿಲವಿಲ್ಲದೇ ಬರೀ ನಿಶ್ಶಬ್ದ.
ಮನದ ಕಡಲದು
ಪಿಸುಮಾತಿನ ಭಾವದಲೆಗಳ
ಭೋರ್ಗರೆತವಿಲ್ಲದೆ ಪ್ರಶಾಂತ.
ಮಾನಸದೊಳು ಭಾವವಾಗಿ
ಕಣ್ಣಂಚಿನ ಮಿಂಚಾಗಿ
ತುಟಿಯಂಚಿನಲಿ ನಗೆಯಾಗುತ್ತಿದ್ದ
ಕವಿತೆಗಳಿಗೀಗ ಧ್ಯಾನಸ್ಥ ಮೌನ.
ನಾನೀಗ ಮೌನದ ಗೆಳತಿ.

Thursday, July 24, 2008

ಹೀಗೇ ಒಂದಿಷ್ಟು ಮಾತುಕತೆ

ಅವತ್ತೊಂದು ದಿನ ಹೀಗೇ ಏನೋ ಓದುತ್ತ ಕುಳಿತಿದ್ದೆ. ದೀಕ್ಷಾ ಪುಟಾಣಿ ಅಲ್ಲೇ ಆಡುತ್ತ ಏನೋ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಹೊರಗಡೆ ಏನೋ ಸದ್ದಾಯ್ತು. ಗುಂಯ್ ಗುಂಯ್ ಎಂದು ಸದ್ದು ಇನ್ನೂ ಜೋರಾಯಿತು. ಹೊರಗೆ ಸಮೀಪದಲ್ಲಿ ವಿಮಾನವೊಂದು ಹಾರುತ್ತಿತು ಅದರದ್ದೇ ಗಲಾಟೆ. ನನ್ನ ಯಾವತ್ತಿನ ಅಭ್ಯಾಸದಂತೆ "ಹೇಯ್ ಬಾರೆ ದೀಕ್ಷಾ ಹೊರಗೆ ನೋಡು ಏನೋ ಶಬ್ದ. ಏನೋ ತೋರ್ಸ್ತಿ ಬಾ " ನಾನು ಕೂಗಿದೆ. ಅವಳಿಗೆ ವಿಮಾನ ತೋರಿಸಬೇಕು ಅಂತ ನಾನು ಬಹಳ ಉತ್ಸಾಹದಲ್ಲಿದ್ದೆ. ಆದರೆ ನನ್ನಆಶ್ಚರ್ಯಕ್ಕೆ ಅವಳು ಯಾವುದೇ ಉತ್ಸಾಹ ತೋರದೆ ಬಹಳ ಉದಾಸೀನ ಭಾವದಲ್ಲಿ " ಅದು ಬೇರೆ ಏನೂ ಅಲ್ಲ. ವಿಮಾನಹೋಗ್ತಾ ಇದೆ ಅದರದ್ದೇ ಶಬ್ದ ಅಷ್ಟೆ." ಅಂದಳು ನನಗೆ ಅಷ್ಟೂ ಗೊತ್ತಿಲ್ಲ ಎಂಬಂತೆ.

ಅಷ್ಟು ಪುಟಾಣಿ ಹುಡುಗಿಯ ಕೈಯಲ್ಲಿ ನಂಗೆ ಮಂಗಳಾರತಿ ಆಗಿತ್ತು. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿಯಂತೆ ಆರಿ ಹೋಗಿತ್ತು. ಈಗಿನ ಮಕ್ಕಳನ್ನು ನಮ್ಮ ಬಾಲ್ಯ ಕಾಲದ ಮಕ್ಕಳಂತೆ ಹೋಲಿಸಿಕೊಂಡು ನಾನು ಅವಳನ್ನು ಕೂಗಿದ್ದು ನನ್ನ ತಪ್ಪೇ ಆಗಿತ್ತು.

ಈಗಿನ ಮಕ್ಕಳಿಗೆ ಆಶ್ಚರ್ಯ ಎನ್ನುವುದು ಯಾವುದೂ ಉಳಿದಿಲ್ಲ ಅಂತ ನನ್ನ ಭಾವನೆ. ಉದಾಹರಣೆಗೆ ವಿಮಾನವೇ. ನಾವೆಲ್ಲ ಚಿಕ್ಕವರಾಗಿದ್ದಾಗ ಆಕಾಶದಲ್ಲಿ ಒಂಚೂರು ಶಬ್ದವಾದರೂ ಸಾಕು ಪಿಳ್ಳೆಯಂತೆ ಕಾಣುತ್ತಿದ್ದ ವಿಮಾನವನ್ನು ನೋಡಲು ಎಲ್ಲಿದ್ದರೂ ಓಡಿ ಹೊರಗೆ ಬಂದು ಮೇಲೆ ನೋಡುತ್ತಿದ್ದೆವು. ಎಲ್ಲಾದರೂ ನಮಗೆ ಅದು ಕಾಣದೇ ಬೇರೆಯವರಿಗೆ ಮಾತ್ರ ಕಂಡುಬಿಟ್ಟಿದ್ದರೆ ಬೇಜಾರಾಗುತ್ತಿತ್ತು. ಈಗಿನ ಮಕ್ಕಳು ವಿಮಾನವನ್ನು ಆಕಾಶದಲ್ಲಿ ನೋಡುವುದೇನು ಎಷ್ಟೋ ಸಲ ವಿಮಾನದಲ್ಲಿ ಕೂತು ಹಾರಾಡಿಯೂ ಇರುತ್ತಾರೆ. ಬೆಂಗಳೂರಿನಂತ ಊರಲ್ಲಿ ದಿನಾ ಬೆಳಗಾದರೆ ಆಕಾಶದಲ್ಲಿ ಎಷ್ಟೋ ವಿಮಾನ ಹಾರುತ್ತಿರುವುದು ಬೇಡಅಂದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದಕ್ಕೇ ಅವರಿಗೆ ನಮ್ಮಂತೆ ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ.

ಈಗಿನ ಮಕ್ಕಳಿಗೆ ಇಂಥದ್ದು
ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ. ಅದೇ ಕಾರಣಕ್ಕೆ ಮಕ್ಕಳಿಗೆ ನಮ್ಮಂತೆ ನಾನು ದೊಡ್ಡವಳಾದ ಮೇಲೆ ದುಡಿಯುವಂತವಳಾದ ಮೇಲೆ ಇಂಥದ್ದನ್ನು ನಾನೇ ತಗೋಬೇಕು" ಅನ್ನುವ ಆಸೆ, ಭಾವನೆಬರುವುದೇ ಇಲ್ಲವೇನೋ ಬಹುಷಃ .

ಇದು ಒಂದು ಉದಾಹರಣೆಯಷ್ಟೇ. ಎಲ್ಲವೂ ಕೈಗೆಟುಕುವುದರಿಂದ ಇನ್ನೂ ಎಷ್ಟೋ ವಿಷಯಗಳಲ್ಲಿ ಮಕ್ಕಳಿಗೆ ಕುತೂಹಲವೆ ಉಳಿದಿಲ್ಲ. ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ! ವಯಸ್ಸಿಗೆ ಮೀರಿ ಎಲ್ಲವೂ ಈಗಿನ ಮಕ್ಕಳಿಗೆ ಗೊತ್ತಿರುತ್ತದೆ. ನಮ್ಮಂತೆ ಆಕಾಶ ನೋಡಿ ಚಂದ್ರ ನಕ್ಷತ್ರಗಳನ್ನು ನೋಡಿ ಆನಂದಿಸೋ ಮನಸ್ಥಿತಿ ಯಾರಿಗೂ ಇಲ್ಲ. ಅದರಲ್ಲೇನಿದೆ ಅನ್ನುವ ನಿರ್ಭಾವುಕ ಮನೋಭಾವ. ನೀತಿ ಕಥೆಗಳು, ಪದ್ಯಗಳು ಯಾರಿಗೆ ಬೇಕಾಗಿದೆ ಈಗ ? ಅವು ಏನೆಂದೇ ಗೊತ್ತಿಲ್ಲ. ನಮ್ಮ ಕಾಲದ ಕಾಗಕ್ಕ ಗುಬ್ಬಕ್ಕಗಳೆಲ್ಲ ಎಲ್ಲಿಗೋ ಹಾರಿ ಹೋಗಿ ಬಹಳ ವರ್ಷಗಳಾಗಿಬಿಟ್ಟಿದೆ. ಹೀಗೆಲ್ಲ ಯೋಚಿಸಿದಾಗ ಬೇಜಾರಾಗುತ್ತದೆ
ನನಗೆ.

ದಿನಾ ಸಂಜೆ ಟೆರೆಸ್ ಮೇಲೆ ಸುಮ್ಮನೇ ಗಾಳಿಗೆ ಮೈಯೊಡ್ಡಿ ನಿಂತು ಲಹರಿಯಲ್ಲಿ ಯೋಚಿಸುತ್ತಿರುವಾಗ ದೀಕ್ಷಾ ಪುಟ್ಟಿ ಬಂದರೆ ಅವಳಿಗೆ ಆಕಾಶ ನಕ್ಷತ್ರ ಚಂದ್ರ ಎಲ್ಲ ತೋರಿಸಿ ಕಥೆ ಹೇಳ್ತಿದ್ದೆ. ಮೊದ ಮೊದಲು ಉತ್ಸಾಹ ತೋರಿಸದೇ ಕೀಟಲೆ ಮಾಡುತ್ತಿದ್ದವಳು ಆಮೇಲೆ ತುಂಬ ಕುತೂಹಲದಿಂದ ಕೇಳುತ್ತಿದ್ದಳು. ನಡು ನಡುವೆ ಮುದ್ದು ಬರುವಂತೆ ಮುಗ್ಧ ಪ್ರಶ್ನೆಗಳು. ಹಾಗೆಯೇ ಒಂದು ದಿನ ಆಕಾಶದತ್ತ ಮುಖ ಮಾಡಿದವಳೇ "ಹಾ . ನಿಮ್ಮನೆ ಚಂದ್ರ ಎಷ್ಟು ದೊಡ್ದಕ್ಕಿದ್ನೆ ! ನಮ್ಮನೆ ಚಂದ್ರ ಸಣ್ಣಕಿದ್ದ ! ಎಂತಕ್ಕೇನಾ !" ಅಂದಳು. ನಂಗೆ ನಗು ಮತ್ತು ಅವಳ ಮೇಲೆ ಮುದ್ದು ಎರಡೂ ಉಕ್ಕಿ ಬಂತು. ನನಗೆ ಮಕ್ಕಳು ಇಂಥ ಕುತೂಹಲಿ ಮತ್ತು ಮುಗ್ಧಭಾವದವರಾಗಿದ್ದಾಗಲೇ ಇಷ್ಟವಾಗೋದು. ಅವಳ ಪ್ರಶ್ನೆಗೆ ಅವಳಂತೆಯೇ ಮುಗ್ಧವಾದ ಉತ್ತರವನ್ನಿತ್ತು , ಅದಕ್ಕೆ ಅವಳು ಕೇಳಿದಇನ್ನಷ್ಟು ಮುಗ್ಧ ಪ್ರಶ್ನೆಗಳಿಗೆ ಮತ್ತೆ ಉತ್ತರ ಹುಡುಕುತ್ತ , ಅವಳು ಹೇಳಿದ ಚಂದಕ್ಕಿಮಾಮ - ಚಕ್ಕುಲಿಮಾಮನ ಕಥೆಯನ್ನು ಮನದಣಿಯೆ ಆನಂದಿಸಿದೆ.

ಮೊನ್ನೆ ಯಾಕೋ ವಿಮಾನದ ಕಥೆ ಮತ್ತು ಚಂದಕ್ಕಿಮಾಮ - ಚಕ್ಕುಲಿಮಾಮಾನ ಕಥೆ ಬಹಳ ನೆನಪಾಗುತ್ತಿತ್ತು, ನೆನಪು ಇಲ್ಲಿ ಅಕ್ಷರವಾಯ್ತು.

Wednesday, July 16, 2008

ಸೋರಿ ಹೋಗುತಿದೆ ಬೆಳದಿಂಗಳು

ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಬೆಳ್ಳಿ ಬೆಳಕ ಕಣ್ತುಂಬಿಕೊಂಡು
ಮನದಣಿಯೆ ಅಂಗಳದಲ್ಲಿ ನಲಿಯುವವರಿಲ್ಲದೇ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅವಳ ಕಂಗಳೊಳಗೆ ಬೆಳದಿಂಗಳಿಳಿಯುವಾಗ
ಅವನು ಅವಳ ಕಣ್ಣಲ್ಲಿ ಕಣ್ಣಿಡಲು ,
ಅವಳ ಕೆನ್ನೆ ಕೆಂಪಾಗಿ ಅವನು ನಗುವುದಕೆ
ಅವನಿಲ್ಲ ಅವಳಿಲ್ಲ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅಳುವ ಕಂದನಿಗೊಮ್ಮೆ
ನಗುವ ಚಂದಕ್ಕಿ ಮಾಮನನು ತೋರಿಸಿ
ಹಾಲು ಬೆಳದಿಂಗಳಲಿ ತೋಯ್ದ ತುತ್ತನುಣಿಸಿ
ಚಂದ್ರನೂರಿಗೆ ಕಳುಹುವೆನೆಂದು ಲಾಲಿ ಹಾಡಿ
ಮುದ್ದಿಸಲು ಯಾರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಶ್ರಾವಣದ ಇರುಳಿನಲಿ
ಕಪ್ಪಿಟ್ಟ ಕಾರ್ಮೋಡ ಕರಗಿ ಮಳೆ ಹನಿಯುವಾಗ
ಮರದ ಮರೆಯಲ್ಲಿಣುಕಿ
ಬೆಳದಿಂಗಳ ನಗೆ ಚೆಲ್ಲುವ ಚಂದಿರನ
ತುಂಬುಮೊಗವ ನೋಡುವವರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

Tuesday, June 24, 2008

ಏಕಾಂತ

ಅಂತ್ಯರಿವಿಲ್ಲದ ಏಕಾಂತ
ಹನಿ ಹನಿದು ಸುರಿದ ಮಳೆ ನಿಂತ ಹೊತ್ತು
ಬೆಳಗೋ ಬೈಗೋ ಅರಿವಿಲ್ಲವಿನಿತೂ
ಕಾರ್ಮುಗಿಲ ಮುಸುಕು ಹೊದ್ದು
ಆಗಸವು
ಮಲಗಿರಲು
ಸಪ್ತ ಸ್ವರಗಳ, ರಾಗ-ತಾಳಗಳ
ನೆನಪಿನ ಮೇಳ ಮನದ ಅಂಗಳದಲ್ಲಿ.
"ನಿ ರೆ ಸಾ"
ತುಟಿಯ ಮೇಲೆ ಸ್ವರಗಳು
ಲಾಸ್ಯವಾಡುತಿರೆ
ಮನದಲ್ಲಿ ಮತ್ತ್ಯಾವುದೋ ರಾಗದಾ ನೆನಹು.
"ಸಾ ರೆ ನಿ ಸಾ"
ಸ್ವರವುಕ್ಕಿ ಬರಲು
ತಾನ ಗಾನದ ಲಹರಿ
ಹರಿವ ನದಿಯಂತೆ ಮನದಿ.
ಕಿಟಕಿಯಾಚೆಯಿಂದ ಬಂದ
ತಿಳಿಬಿಸಿಲ
ಕೋಲು
ಚಿನ್ನದೆಳೆಯಂತೆ ಹೊಳೆಹೊಳೆದು
ಕಣ್ಣೆವೆಗಳ ಸೋಕಿದಾಗ
ಹೊಸತಾಗಿ ಕಂಡಿತ್ತು
ರಾಗಲಹರಿಯಲಿ
ಮಿಂದ
ಸುತ್ತಲಿನ ಏಕಾಂತದ ಲೋಕ.
ಮತ್ತೆ ಹನಿ ಹನಿದು ಮಳೆ ಜಿಮುರಿ ಬರಲು
ಕಾರ್ಮುಗಿಲು ಕರಗಿ ಆಗಸವು ತಿಳಿಯಾಗಿ
ಅಲ್ಲೇ ಅಂಚಲ್ಲಿ ನಗುತಿತ್ತು ಕಾಮನಬಿಲ್ಲು.
ಇನಿದನಿಯ ಹಕ್ಕಿ ಹಿಂಡು
ಬಾನಿನಾಚೆ ಹಾರುತಿರೆ,
ತುಂಬಿ ಬಂದ ಮನವು ಉಲಿಯಿತು ಮೆಲ್ಲನೆ
ಏಕಾಂತದಲೂ ಇದೆಯೇ ಪರಿಯ ಚೆಲುವು?


Monday, June 9, 2008

ಹಳೆಯ ಹಾಡೊಂದು ನೆನಪಾಗಿ

ಬೆಳಿಗ್ಗೆ ಎದ್ದಾಗ ಯಾವುದಾದರೂ ಹಾಡು ನೆನಪಾಗಿ ತುಟಿಯ ಮೇಲೆ ನಲಿಯತೊಡಗಿದರೆ ಸಾಕು ಅವತ್ತು ದಿನವಿಡೀ ಅದೇ ಹಾಡೇ ಗುನುಗುತ್ತಿರುತ್ತೇನೆ. ಒಮ್ಮೊಮ್ಮೆ ಇಷ್ಟವಿಲ್ಲದ ಯಾವುದಾದರೂ ಹಾಡೊಂದು ಹತ್ತಿಕೊಂಡು ದಿನವಿಡೀ ಒದ್ದಾಡುತ್ತೇನೆ. ಒಮ್ಮೊಮ್ಮೆ ಬಹಳ ಇಷ್ಟವಾದ ಹಾಡುಗಳು ಹತ್ತಿಕೊಂಡು ಉಲ್ಲಸಿತಳಾಗಿರುತ್ತೇನೆ.

ಇವತ್ತೂ ಹಾಗೇ ಆಯ್ತು. ಬೆಳಿಗ್ಗೆ ಎದ್ದಾಗಲಿಂದ ನನ್ನಿಷ್ಟದ ಹಾಡೊಂದು ತುಟಿಯ ಮೇಲೆ ನಲಿಯುತ್ತಲಿದೆ. ಹಾಡು ಯಾವುದೆಂದರೆ, ಬಹಳ ವರ್ಷಗಳ ಹಿಂದೆ ನಾಟಕವೊಂದಕ್ಕೆ (ಚಂದ್ರಗುಪ್ತ ಮೌರ್ಯ) ನನ್ನ ಅಪ್ಪ ಬರೆದಿದ್ದ ಹಾಡು. ಬಹಳ ಸುಂದರವಾಗಿ ರಾಗ ಸಂಯೋಜಿಸಿ ಹಾಡಿದ್ದರು ಅಪ್ಪ ಆಗ. ಆಗ ನಾನೂ, ಅಕ್ಕನೂ ತುಂಬ ಚಿಕ್ಕವರು. ಆಗೆಲ್ಲ ನಾವು ಹಾಡನ್ನು ತುಂಬ ಮೆಚ್ಚಿಕೊಂಡು, ಕಲಿತುಕೊಂಡು ಯಾವಾಗಲೂ ಅಪ್ಪನೆದುರಿಗೆ ಹಾಡುತ್ತಿದ್ದೆವು. ನಾಟಕವನ್ನು ನೋಡಿದ ನೆನಪನ್ನು ಹಂಚಿಕೊಳ್ಳ ಹೋದರೆ ಅದೊಂದು ದೊಡ್ಡ ಕಥೆಯೇ ಆದೀತು, ಅದೆಲ್ಲ ಇಲ್ಲಿ ಅಮುಖ್ಯ. ಸುಂದರ ಹಾಡನ್ನು ಎಲ್ಲರೊಡನೆ ಹಂಚಿಕೊಳ್ಳುವ ಮನಸ್ಸಾಯಿತು. ಮನಸು ರಾಗವಾಗಿ ಹಾಡನ್ನು ಇನ್ನೂ ಗುನುಗುತ್ತಲೇ ಇದೆ, ಹಳೆಯ ದಿನಗಳಲ್ಲೆಲ್ಲೋ ಕಳೆದುಹೋಗಿದ್ದೇನೆ ಅನ್ನಿಸುತ್ತಿದೆ. :)

ಇಲ್ಲಿದೆ ಹಾಡು.
** ಚಂದ್ರಗುಪ್ತ ಮೌರ್ಯ **
ಪಾಟಲಿಪುತ್ರದ ಅಧಿಪತಿಯಾಗಿ
ಸರ್ವಾರ್ಥಸಿದ್ದಿಯು ಆಳುತಲಿರಲು
ಪಟ್ಟದರಸಿಯಲಿ ನಂದನರುದಯಿಸಿ
ಇಷ್ಟದರಸಿಯಲಿ ಮೌರ್ಯರು ಜನಿಸಿ

ಶೂರ ಮೌರ್ಯನಿಗೆ ನೂರು ತನುಜರು
ಅವರ ಶೌರ್ಯವನು ಸಹಿಸದ ನಂದರು
ಸಮಯ ಸಾಧಿಸಿ ಸೆರೆಯಲಿ ಇರಿಸಿ
ತುತ್ತು ಅನ್ನವನು ಮಾತ್ರವೇ ಒದಗಿಸಿ
ಕೊಲ್ಲಲವರನು ಹವಣಿಸಿದ||

ಸೇಡು ತೀರಿಸೆ ಮೌರ್ಯರು ಚಿಂತಿಸಿ
ತಮ್ಮಾಹಾರವ ಒಬ್ಬನಿಗುಣಿಸಿ
ಚತುರ ಚಂದ್ರನನು ಉಳಿಸಿದರು
ನಂದರ ನಾಶಕೆ ಅಸುನೀಗಿದರು||

ಕಪಟ ಶಿಲ್ಪವನು ಭೇದಿಸಿ ಚಂದ್ರನು
ಬಿಡುಗಡೆಯಾಗಿ ಹೊರಗೆ ಬಂದನು
ಅನ್ನ ಸತ್ರದ ಆ ಹೊರ ಮನೆಯಲಿ
ಬಂಧಿಯಾದನು ಬೇರೆ ರೂಪದಲಿ ||

ಯೋಗಿಯೊಬ್ಬನು ಸತ್ರಕೆ ಬಂದನು
ನಂದರಿಂದ ಅಪಮಾನಿತನಾದನು
ಕುಪಿತನಾಗಿ ಆ ಚಾಣಕ್ಯ
ಶಪಥಗೈದನು ನಂದರಂತ್ಯಕೆ ||

ಚಂದ್ರಗುಪ್ತನನು ಸಖನನಾಗಿಸಿ
ಪರ್ವತರಾಜನ ಸಖ್ಯವ ಬೆಳೆಸಿ
ನಂದಾರಾಳ್ವಿಕೆ ಅಂತ್ಯವಗೊಳಿಸಿ
ಚಂದ್ರಗುಪ್ತನನು ದೊರೆಯಾಗಿಸಿದ||

Tuesday, May 27, 2008

ಅಲೆಬಂದು ಹೋದಮೇಲೆ ..

ನೀಲಿ ಕಡಲಿನ ಅಲೆಗಳು ಎಂದಿಗಿಂತಲೂ ಅಂದು ಹೆಚ್ಚಾಗಿಯೇ ಹುಚ್ಚೆದ್ದಿದ್ದವು. ಇಳಿಸಂಜೆಯ ಬಿಸಿಲೊಡನೆ ಕಡಲ ತೀರದಲ್ಲಿ ಬೆಚ್ಚನೆಯ ಕಾವಿತ್ತು. ಗಾಳಿ ತುಸು ಜೋರಾಗಿಯೇ ಬೀಸುತ್ತಿತ್ತು. ಜಡೆ ಕಟ್ಟದೆ ಹಾಗೆಯೇ ಬಿಟ್ಟಿದ್ದ ನನ್ನ ನೀಳ ಕೂದಲು ಗಾಳಿಗೆ ಹಾರುತ್ತಿತ್ತು. ಸೀರೆಯ ಉದ್ದನೆಯ ಸೆರಗು ಗಾಳಿಯೊಡನೆ ತೇಲುತ್ತಾ ನನ್ನ ನಿನ್ನ ನಡುವೆ ಪರದೆಯಂತೆ ಅನ್ನಿಸುತ್ತಿತ್ತು. ನಮ್ಮೊಡನೆ ಬಂದವರೆಲ್ಲ ಆಚೆಯೆಲ್ಲೋ ನೀರಲ್ಲಿ ಆಡುತ್ತಿದ್ದರು ಅನ್ನಿಸುತ್ತದೆ. ನಂಗೆ ಅದ್ಯಾವುದರ ಪರಿವೆಯಿರಲಿಲ್ಲ. ಅಲ್ಲಿದ್ದಿದ್ದು ನಾವಿಬ್ಬರೇ ಅನ್ನಿಸುತ್ತಿತ್ತು ನನಗೆ. ಪರದೆಯಂತೆ ನಡುವೆ ಹಾರುತ್ತಿದ್ದ ನೀಲಿ ಸೆರಗಿನಾಚೆ ನೀನು ಕಾಣುತ್ತಿದ್ದೆ. ತುಂಬ ಖುಷಿಯಾಗಿದ್ದೆ ನೀನು, ಬಂದು ಹೋಗುತ್ತಿದ್ದ ಅಲೆಗಳೊಡನೆ ಆಡುತ್ತ ನಿನ್ನ ಯಾವತ್ತಿನ ಪ್ರಸನ್ನ ಮುಖಭಾವದಲ್ಲಿ. ನನ್ನಮನವೋ ಯಾವತ್ತಿನಂತೆ ಅಂದೂ ಕೂಡ ದ್ವಂದ್ವ ತುಂಬಿದ ಗೂಡು. ಏನೋ ಕಳವಳ. ಏನನ್ನೋ ನಿರ್ಧರಿಸಬೇಕಾದ ತೀವ್ರತೆ ನನ್ನಲ್ಲಿ.

ಒಮ್ಮೆಕಣ್ಣ ಮುಂದೆ ಹರವಿಕೊಂಡಿದ್ದ ಅಗಾಧ ಜಲರಾಶಿಯನ್ನು ನೋಡಿದೆ. ಏನೋ ಒಂದು ಧನ್ಯತಾ ಭಾವ, ಶರಣಾಗತ ಭಾವ ಮನದಲ್ಲಿ ಉಕ್ಕಿ ಬಂತು. ಸವಿಸ್ತಾರದೆದುರು ತೃಣಮಾತ್ರಳು ನಾನು ಎನ್ನುವ ಭಾವ, ಇದಲ್ಲದೇ ಮತ್ತೆಲ್ಲವೂ ಶೂನ್ಯ ಎನ್ನುವ ಭಾವ ಮನದ ಕಡಲಲ್ಲಿ ಉಕ್ಕಿ ಉಕ್ಕಿ ಬಂತು . ತಿರುಗಿ ನಿನ್ನತ್ತನೋಡಿದೆ. ಮತ್ತದೇ ಭಾವ, ಕಡಲನ್ನು ನೋಡಿದಾಗ ಮನದಲ್ಲಿ ಉಕ್ಕಿದ ಭಾವವೇ ಮತ್ತೊಮ್ಮೆ ಬಂತು. ಹೌದು ಮೊದಲೆಲ್ಲ ನನಗೆ ಕಡಲನ್ನು ಕಣ್ಣುಹಾಯುವಷ್ಟು ದೂರ ನೋಡಿದಾಗ ಮಾತ್ರ ಶರಣಾಗತ ಭಾವ,ಸೋತ ಭಾವ ಬರುತ್ತಿದ್ದಿದ್ದು . ಆಗೊಮ್ಮೆ ನಿನ್ನ ಕಂಡಾಗಿನಿಂದ ನಿನ್ನ ನೋಡಿದಾಗಲೂ ಅದೇ ಭಾವ ಮನದಲ್ಲಿ ಮೂಡುತ್ತದೆ ಯಾಕೋ ಗೊತ್ತಿಲ್ಲ.

ಅಲೆಗಳ ನೀರಿನಿಂದ ಒದ್ದೆಯಾದ ಮರಳಿನ ತೀರದ ಮೇಲೆ ಹೆಜ್ಜೆ ಗುರುತನ್ನು ಇಡುತ್ತಾ ಹಾಗೆಯೇ ಅದೆಷ್ಟೋ ದೂರ ಮೌನವಾಗಿ ನಡೆದು ಹೋಗುವ ಮನಸ್ಸಾಯಿತು ನನಗೆ. ನೀನೂ ನನ್ನೊಡನೆ ಬಂದು ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಬೇಕೆಂಬ ಹಂಬಲ ಮನದಲ್ಲಿತ್ತು. ನೀನೋ ನೀರಲ್ಲಿ ಮುಳುಗೇಳುತ್ತ ಅಲೆಗಳೊಡನೆ ಆಡುತ್ತಿದ್ದೆ. ನನಗೋ ಮಳೆಹನಿಗಳು ಬೀಳುವಾಗಷ್ಟೇ ನೀರಲ್ಲಿ ಆಡಬೇಕೆನಿಸುವುದು. ಅದು ಬಿಟ್ಟರೆ ಕಡಲ ನೀರಲ್ಲಿ ಇಳಿದು ಆಡಬೇಕೆಂದು ಅನ್ನಿಸುವುದೇ ಇಲ್ಲ. ನಾನು ನೀನಿದ್ದ ಕಡೆಗೆ ಬೆನ್ನು ಹಾಕಿ ಹೆಜ್ಜೆ ಮುಂದಿಡಲು ಶುರುವಿಟ್ಟೆ. ನಾನೊಂದಿಷ್ಟು ದೂರ ನಡೆದ ಮೇಲೆ ನೀನು ಓಡೋಡುತ್ತ ಬಂದು ನನ್ನ ಜೊತೆಯಾಗುವೆಯೇನೋ ಅಂದುಕೊಂಡೇ ನಡೆಯಲಾರಂಭಿಸಿದೆ.

ಮರಳಿನ ಮೇಲೆ ಮೂಡುತ್ತಿದ ಅದೆಷ್ಟೋ ಹೆಜ್ಜೆಗುರುತುಗಳನ್ನು ಹಿಂದೆ ಹಾಕುತ್ತ ನಾನು ಅದೆಷ್ಟು ದೂರ ನಡೆದುಬಿಟ್ಟೆನೋ. ಕಾಲನ್ನು ಸೋಕಿ ಹೋದ ಅಲೆಗಳ ಲೆಕ್ಕವಿಡಲಾಗಲಿಲ್ಲ ನನಗೆ. ದೂರ ದೂರದವರೆಗೂ ನೋಡಿದಷ್ಟೂ ಮುಗಿಯದ ನೀಲಿ ಕಡಲು. ನಡೆದಷ್ಟೂ ದೂರವಾದಂತೆ ಕಾಣುವ ಕೈಗೆಟುಕದ ನೀಲಿ ಆಗಸ. ಎಲ್ಲ ನೋಡುತ್ತ ನೀಲಿ ಸೀರೆಯುಟ್ಟಿದ್ದ ನಾನೂ ನೀಲಿ ಅನಂತದಲ್ಲಿ ಲೀನವಾಗುತ್ತಿರುವೆನೇನೋ ಅನ್ನಿಸಿತು.

ಅಷ್ಟು ದೂರ ನಡೆದ ಮೇಲೆ ನೀನೂ ನನ್ನೊಡನೆ ಮೌನವಾಗಿ ನಡೆದುಬರುತ್ತಿರಬಹುದಾ ಅನ್ನಿಸಿ ಹಿಂತಿರುಗಿ ನೋಡಿದೆ. ಇಲ್ಲ ಅಲ್ಲಿ ನೀನಿರಲಿಲ್ಲ. ಅದೆಷ್ಟೋ ದೂರದಲ್ಲಿ ನಾ ಬಿಟ್ಟು ಬಂದ ನೀನು ಇನ್ನೂ ಅಲ್ಲೇನಿಂತಿದ್ದೆ. ದೂರದ ಒಂದು ಅಕೃತಿಯಂತೆ ಕಾಣುತ್ತಿದ್ದೆ. ಒಂದೆರಡು ನಿಮಿಷಗಳ ನಂತರ ನೀನು ನನ್ನತ್ತ ಕೈ ಬೀಸುತ್ತಿರುವುದು ಕಂಡಿತು. ಕ್ಷಣ ನನ್ನ ನೋಟ ಕೊಂಚ ಮಸುಕಾಯಿತು. ಮತ್ತೆ ಮತ್ತೆ ನಿನ್ನತ್ತ ನೋಡಿದೆ. ಇಲ್ಲ, ಆಗ ಅದೇ ಕಡಲಿನ ಮುಂದೆ ಬರುತ್ತಿದ್ದ ಸೋತ ಭಾವ ಧನ್ಯತಾ ಭಾವ ನನ್ನಲ್ಯಾಕೋ ಮೂಡಲಿಲ್ಲ.

ನಾ ನಡೆದು ಬಂದ ದಾರಿಯನ್ನೇನೋಡಿದೆ. ಅಚ್ಚೊತ್ತಿದ್ದ ಹೆಜ್ಜೆ ಗುರುತೊಂದೂ ಕಾಣಲಿಲ್ಲ. ಬಂದು ಹೋದ ಅಲೆಗಳು ಅವುಗಳನ್ನೆಲ್ಲ ಕಡಲ ಮಡಿಲೊಳಗೆಲ್ಲೋ ಸೇರಿಸಿಯಾಗಿತ್ತು. ನಿನ್ನಿಂದ ಬಹಳ ದೂರ ನಡೆದು ಬಂದುಬಿಟ್ಟಿದ್ದೇನೆಂದು ದೃಢವಾಗಿದ್ದು ಆಗಲೇ. ಮರಳಿ ನಿನ್ನೆಡೆಗೆ ಬರಲಾರದಷ್ಟು ದಣಿವಾಗಿದೆಯೆನಿಸಿತು. ಏನೋ ನಿರ್ಧಾರವಾದಂತಾಗಿ ಮನಸ್ಸು ಭಾರವಾದ ನಿಟ್ಟುಸಿರನ್ನು ಹೊರಹಾಕಿತು. ಅಲೆಬಂದು ಹೋದಮೇಲೆ ನಿಶ್ಶಬ್ದವಾದ ದಡದಂತಾಗಿತ್ತು ಮನ.

ಮತ್ತೆ ನಮ್ಮೊಡನೆ ಬಂದವರೆಲ್ಲ ಹೊರಡುವ ಸಮಯವಾಯಿತೆಂದು ಕೂಗುತ್ತಿದ್ದರು. ಕಡಲಿನೆಡೆಗೆ ಬೆನ್ನು ಹಾಕಿ ಎಲ್ಲರೂ ಹೊರಟರು, ನೀನೂ , ನಾನೂ . ಅಷ್ಟು ಹೊತ್ತು ಬೆಳಗುತ್ತಿದ್ದ ಸೂರ್ಯ ನಮ್ಮ ಹಿಂದೆ ಅದೇ ಕಡಲಿನಾಳದಲ್ಲಿ ಮುಳುಗುತ್ತಿದ್ದ.