Thursday, July 24, 2008

ಹೀಗೇ ಒಂದಿಷ್ಟು ಮಾತುಕತೆ

ಅವತ್ತೊಂದು ದಿನ ಹೀಗೇ ಏನೋ ಓದುತ್ತ ಕುಳಿತಿದ್ದೆ. ದೀಕ್ಷಾ ಪುಟಾಣಿ ಅಲ್ಲೇ ಆಡುತ್ತ ಏನೋ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಹೊರಗಡೆ ಏನೋ ಸದ್ದಾಯ್ತು. ಗುಂಯ್ ಗುಂಯ್ ಎಂದು ಸದ್ದು ಇನ್ನೂ ಜೋರಾಯಿತು. ಹೊರಗೆ ಸಮೀಪದಲ್ಲಿ ವಿಮಾನವೊಂದು ಹಾರುತ್ತಿತು ಅದರದ್ದೇ ಗಲಾಟೆ. ನನ್ನ ಯಾವತ್ತಿನ ಅಭ್ಯಾಸದಂತೆ "ಹೇಯ್ ಬಾರೆ ದೀಕ್ಷಾ ಹೊರಗೆ ನೋಡು ಏನೋ ಶಬ್ದ. ಏನೋ ತೋರ್ಸ್ತಿ ಬಾ " ನಾನು ಕೂಗಿದೆ. ಅವಳಿಗೆ ವಿಮಾನ ತೋರಿಸಬೇಕು ಅಂತ ನಾನು ಬಹಳ ಉತ್ಸಾಹದಲ್ಲಿದ್ದೆ. ಆದರೆ ನನ್ನಆಶ್ಚರ್ಯಕ್ಕೆ ಅವಳು ಯಾವುದೇ ಉತ್ಸಾಹ ತೋರದೆ ಬಹಳ ಉದಾಸೀನ ಭಾವದಲ್ಲಿ " ಅದು ಬೇರೆ ಏನೂ ಅಲ್ಲ. ವಿಮಾನಹೋಗ್ತಾ ಇದೆ ಅದರದ್ದೇ ಶಬ್ದ ಅಷ್ಟೆ." ಅಂದಳು ನನಗೆ ಅಷ್ಟೂ ಗೊತ್ತಿಲ್ಲ ಎಂಬಂತೆ.

ಅಷ್ಟು ಪುಟಾಣಿ ಹುಡುಗಿಯ ಕೈಯಲ್ಲಿ ನಂಗೆ ಮಂಗಳಾರತಿ ಆಗಿತ್ತು. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿಯಂತೆ ಆರಿ ಹೋಗಿತ್ತು. ಈಗಿನ ಮಕ್ಕಳನ್ನು ನಮ್ಮ ಬಾಲ್ಯ ಕಾಲದ ಮಕ್ಕಳಂತೆ ಹೋಲಿಸಿಕೊಂಡು ನಾನು ಅವಳನ್ನು ಕೂಗಿದ್ದು ನನ್ನ ತಪ್ಪೇ ಆಗಿತ್ತು.

ಈಗಿನ ಮಕ್ಕಳಿಗೆ ಆಶ್ಚರ್ಯ ಎನ್ನುವುದು ಯಾವುದೂ ಉಳಿದಿಲ್ಲ ಅಂತ ನನ್ನ ಭಾವನೆ. ಉದಾಹರಣೆಗೆ ವಿಮಾನವೇ. ನಾವೆಲ್ಲ ಚಿಕ್ಕವರಾಗಿದ್ದಾಗ ಆಕಾಶದಲ್ಲಿ ಒಂಚೂರು ಶಬ್ದವಾದರೂ ಸಾಕು ಪಿಳ್ಳೆಯಂತೆ ಕಾಣುತ್ತಿದ್ದ ವಿಮಾನವನ್ನು ನೋಡಲು ಎಲ್ಲಿದ್ದರೂ ಓಡಿ ಹೊರಗೆ ಬಂದು ಮೇಲೆ ನೋಡುತ್ತಿದ್ದೆವು. ಎಲ್ಲಾದರೂ ನಮಗೆ ಅದು ಕಾಣದೇ ಬೇರೆಯವರಿಗೆ ಮಾತ್ರ ಕಂಡುಬಿಟ್ಟಿದ್ದರೆ ಬೇಜಾರಾಗುತ್ತಿತ್ತು. ಈಗಿನ ಮಕ್ಕಳು ವಿಮಾನವನ್ನು ಆಕಾಶದಲ್ಲಿ ನೋಡುವುದೇನು ಎಷ್ಟೋ ಸಲ ವಿಮಾನದಲ್ಲಿ ಕೂತು ಹಾರಾಡಿಯೂ ಇರುತ್ತಾರೆ. ಬೆಂಗಳೂರಿನಂತ ಊರಲ್ಲಿ ದಿನಾ ಬೆಳಗಾದರೆ ಆಕಾಶದಲ್ಲಿ ಎಷ್ಟೋ ವಿಮಾನ ಹಾರುತ್ತಿರುವುದು ಬೇಡಅಂದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದಕ್ಕೇ ಅವರಿಗೆ ನಮ್ಮಂತೆ ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ.

ಈಗಿನ ಮಕ್ಕಳಿಗೆ ಇಂಥದ್ದು
ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ. ಅದೇ ಕಾರಣಕ್ಕೆ ಮಕ್ಕಳಿಗೆ ನಮ್ಮಂತೆ ನಾನು ದೊಡ್ಡವಳಾದ ಮೇಲೆ ದುಡಿಯುವಂತವಳಾದ ಮೇಲೆ ಇಂಥದ್ದನ್ನು ನಾನೇ ತಗೋಬೇಕು" ಅನ್ನುವ ಆಸೆ, ಭಾವನೆಬರುವುದೇ ಇಲ್ಲವೇನೋ ಬಹುಷಃ .

ಇದು ಒಂದು ಉದಾಹರಣೆಯಷ್ಟೇ. ಎಲ್ಲವೂ ಕೈಗೆಟುಕುವುದರಿಂದ ಇನ್ನೂ ಎಷ್ಟೋ ವಿಷಯಗಳಲ್ಲಿ ಮಕ್ಕಳಿಗೆ ಕುತೂಹಲವೆ ಉಳಿದಿಲ್ಲ. ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ! ವಯಸ್ಸಿಗೆ ಮೀರಿ ಎಲ್ಲವೂ ಈಗಿನ ಮಕ್ಕಳಿಗೆ ಗೊತ್ತಿರುತ್ತದೆ. ನಮ್ಮಂತೆ ಆಕಾಶ ನೋಡಿ ಚಂದ್ರ ನಕ್ಷತ್ರಗಳನ್ನು ನೋಡಿ ಆನಂದಿಸೋ ಮನಸ್ಥಿತಿ ಯಾರಿಗೂ ಇಲ್ಲ. ಅದರಲ್ಲೇನಿದೆ ಅನ್ನುವ ನಿರ್ಭಾವುಕ ಮನೋಭಾವ. ನೀತಿ ಕಥೆಗಳು, ಪದ್ಯಗಳು ಯಾರಿಗೆ ಬೇಕಾಗಿದೆ ಈಗ ? ಅವು ಏನೆಂದೇ ಗೊತ್ತಿಲ್ಲ. ನಮ್ಮ ಕಾಲದ ಕಾಗಕ್ಕ ಗುಬ್ಬಕ್ಕಗಳೆಲ್ಲ ಎಲ್ಲಿಗೋ ಹಾರಿ ಹೋಗಿ ಬಹಳ ವರ್ಷಗಳಾಗಿಬಿಟ್ಟಿದೆ. ಹೀಗೆಲ್ಲ ಯೋಚಿಸಿದಾಗ ಬೇಜಾರಾಗುತ್ತದೆ
ನನಗೆ.

ದಿನಾ ಸಂಜೆ ಟೆರೆಸ್ ಮೇಲೆ ಸುಮ್ಮನೇ ಗಾಳಿಗೆ ಮೈಯೊಡ್ಡಿ ನಿಂತು ಲಹರಿಯಲ್ಲಿ ಯೋಚಿಸುತ್ತಿರುವಾಗ ದೀಕ್ಷಾ ಪುಟ್ಟಿ ಬಂದರೆ ಅವಳಿಗೆ ಆಕಾಶ ನಕ್ಷತ್ರ ಚಂದ್ರ ಎಲ್ಲ ತೋರಿಸಿ ಕಥೆ ಹೇಳ್ತಿದ್ದೆ. ಮೊದ ಮೊದಲು ಉತ್ಸಾಹ ತೋರಿಸದೇ ಕೀಟಲೆ ಮಾಡುತ್ತಿದ್ದವಳು ಆಮೇಲೆ ತುಂಬ ಕುತೂಹಲದಿಂದ ಕೇಳುತ್ತಿದ್ದಳು. ನಡು ನಡುವೆ ಮುದ್ದು ಬರುವಂತೆ ಮುಗ್ಧ ಪ್ರಶ್ನೆಗಳು. ಹಾಗೆಯೇ ಒಂದು ದಿನ ಆಕಾಶದತ್ತ ಮುಖ ಮಾಡಿದವಳೇ "ಹಾ . ನಿಮ್ಮನೆ ಚಂದ್ರ ಎಷ್ಟು ದೊಡ್ದಕ್ಕಿದ್ನೆ ! ನಮ್ಮನೆ ಚಂದ್ರ ಸಣ್ಣಕಿದ್ದ ! ಎಂತಕ್ಕೇನಾ !" ಅಂದಳು. ನಂಗೆ ನಗು ಮತ್ತು ಅವಳ ಮೇಲೆ ಮುದ್ದು ಎರಡೂ ಉಕ್ಕಿ ಬಂತು. ನನಗೆ ಮಕ್ಕಳು ಇಂಥ ಕುತೂಹಲಿ ಮತ್ತು ಮುಗ್ಧಭಾವದವರಾಗಿದ್ದಾಗಲೇ ಇಷ್ಟವಾಗೋದು. ಅವಳ ಪ್ರಶ್ನೆಗೆ ಅವಳಂತೆಯೇ ಮುಗ್ಧವಾದ ಉತ್ತರವನ್ನಿತ್ತು , ಅದಕ್ಕೆ ಅವಳು ಕೇಳಿದಇನ್ನಷ್ಟು ಮುಗ್ಧ ಪ್ರಶ್ನೆಗಳಿಗೆ ಮತ್ತೆ ಉತ್ತರ ಹುಡುಕುತ್ತ , ಅವಳು ಹೇಳಿದ ಚಂದಕ್ಕಿಮಾಮ - ಚಕ್ಕುಲಿಮಾಮನ ಕಥೆಯನ್ನು ಮನದಣಿಯೆ ಆನಂದಿಸಿದೆ.

ಮೊನ್ನೆ ಯಾಕೋ ವಿಮಾನದ ಕಥೆ ಮತ್ತು ಚಂದಕ್ಕಿಮಾಮ - ಚಕ್ಕುಲಿಮಾಮಾನ ಕಥೆ ಬಹಳ ನೆನಪಾಗುತ್ತಿತ್ತು, ನೆನಪು ಇಲ್ಲಿ ಅಕ್ಷರವಾಯ್ತು.

Wednesday, July 16, 2008

ಸೋರಿ ಹೋಗುತಿದೆ ಬೆಳದಿಂಗಳು

ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಬೆಳ್ಳಿ ಬೆಳಕ ಕಣ್ತುಂಬಿಕೊಂಡು
ಮನದಣಿಯೆ ಅಂಗಳದಲ್ಲಿ ನಲಿಯುವವರಿಲ್ಲದೇ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅವಳ ಕಂಗಳೊಳಗೆ ಬೆಳದಿಂಗಳಿಳಿಯುವಾಗ
ಅವನು ಅವಳ ಕಣ್ಣಲ್ಲಿ ಕಣ್ಣಿಡಲು ,
ಅವಳ ಕೆನ್ನೆ ಕೆಂಪಾಗಿ ಅವನು ನಗುವುದಕೆ
ಅವನಿಲ್ಲ ಅವಳಿಲ್ಲ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅಳುವ ಕಂದನಿಗೊಮ್ಮೆ
ನಗುವ ಚಂದಕ್ಕಿ ಮಾಮನನು ತೋರಿಸಿ
ಹಾಲು ಬೆಳದಿಂಗಳಲಿ ತೋಯ್ದ ತುತ್ತನುಣಿಸಿ
ಚಂದ್ರನೂರಿಗೆ ಕಳುಹುವೆನೆಂದು ಲಾಲಿ ಹಾಡಿ
ಮುದ್ದಿಸಲು ಯಾರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಶ್ರಾವಣದ ಇರುಳಿನಲಿ
ಕಪ್ಪಿಟ್ಟ ಕಾರ್ಮೋಡ ಕರಗಿ ಮಳೆ ಹನಿಯುವಾಗ
ಮರದ ಮರೆಯಲ್ಲಿಣುಕಿ
ಬೆಳದಿಂಗಳ ನಗೆ ಚೆಲ್ಲುವ ಚಂದಿರನ
ತುಂಬುಮೊಗವ ನೋಡುವವರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

Tuesday, June 24, 2008

ಏಕಾಂತ

ಅಂತ್ಯರಿವಿಲ್ಲದ ಏಕಾಂತ
ಹನಿ ಹನಿದು ಸುರಿದ ಮಳೆ ನಿಂತ ಹೊತ್ತು
ಬೆಳಗೋ ಬೈಗೋ ಅರಿವಿಲ್ಲವಿನಿತೂ
ಕಾರ್ಮುಗಿಲ ಮುಸುಕು ಹೊದ್ದು
ಆಗಸವು
ಮಲಗಿರಲು
ಸಪ್ತ ಸ್ವರಗಳ, ರಾಗ-ತಾಳಗಳ
ನೆನಪಿನ ಮೇಳ ಮನದ ಅಂಗಳದಲ್ಲಿ.
"ನಿ ರೆ ಸಾ"
ತುಟಿಯ ಮೇಲೆ ಸ್ವರಗಳು
ಲಾಸ್ಯವಾಡುತಿರೆ
ಮನದಲ್ಲಿ ಮತ್ತ್ಯಾವುದೋ ರಾಗದಾ ನೆನಹು.
"ಸಾ ರೆ ನಿ ಸಾ"
ಸ್ವರವುಕ್ಕಿ ಬರಲು
ತಾನ ಗಾನದ ಲಹರಿ
ಹರಿವ ನದಿಯಂತೆ ಮನದಿ.
ಕಿಟಕಿಯಾಚೆಯಿಂದ ಬಂದ
ತಿಳಿಬಿಸಿಲ
ಕೋಲು
ಚಿನ್ನದೆಳೆಯಂತೆ ಹೊಳೆಹೊಳೆದು
ಕಣ್ಣೆವೆಗಳ ಸೋಕಿದಾಗ
ಹೊಸತಾಗಿ ಕಂಡಿತ್ತು
ರಾಗಲಹರಿಯಲಿ
ಮಿಂದ
ಸುತ್ತಲಿನ ಏಕಾಂತದ ಲೋಕ.
ಮತ್ತೆ ಹನಿ ಹನಿದು ಮಳೆ ಜಿಮುರಿ ಬರಲು
ಕಾರ್ಮುಗಿಲು ಕರಗಿ ಆಗಸವು ತಿಳಿಯಾಗಿ
ಅಲ್ಲೇ ಅಂಚಲ್ಲಿ ನಗುತಿತ್ತು ಕಾಮನಬಿಲ್ಲು.
ಇನಿದನಿಯ ಹಕ್ಕಿ ಹಿಂಡು
ಬಾನಿನಾಚೆ ಹಾರುತಿರೆ,
ತುಂಬಿ ಬಂದ ಮನವು ಉಲಿಯಿತು ಮೆಲ್ಲನೆ
ಏಕಾಂತದಲೂ ಇದೆಯೇ ಪರಿಯ ಚೆಲುವು?


Monday, June 9, 2008

ಹಳೆಯ ಹಾಡೊಂದು ನೆನಪಾಗಿ

ಬೆಳಿಗ್ಗೆ ಎದ್ದಾಗ ಯಾವುದಾದರೂ ಹಾಡು ನೆನಪಾಗಿ ತುಟಿಯ ಮೇಲೆ ನಲಿಯತೊಡಗಿದರೆ ಸಾಕು ಅವತ್ತು ದಿನವಿಡೀ ಅದೇ ಹಾಡೇ ಗುನುಗುತ್ತಿರುತ್ತೇನೆ. ಒಮ್ಮೊಮ್ಮೆ ಇಷ್ಟವಿಲ್ಲದ ಯಾವುದಾದರೂ ಹಾಡೊಂದು ಹತ್ತಿಕೊಂಡು ದಿನವಿಡೀ ಒದ್ದಾಡುತ್ತೇನೆ. ಒಮ್ಮೊಮ್ಮೆ ಬಹಳ ಇಷ್ಟವಾದ ಹಾಡುಗಳು ಹತ್ತಿಕೊಂಡು ಉಲ್ಲಸಿತಳಾಗಿರುತ್ತೇನೆ.

ಇವತ್ತೂ ಹಾಗೇ ಆಯ್ತು. ಬೆಳಿಗ್ಗೆ ಎದ್ದಾಗಲಿಂದ ನನ್ನಿಷ್ಟದ ಹಾಡೊಂದು ತುಟಿಯ ಮೇಲೆ ನಲಿಯುತ್ತಲಿದೆ. ಹಾಡು ಯಾವುದೆಂದರೆ, ಬಹಳ ವರ್ಷಗಳ ಹಿಂದೆ ನಾಟಕವೊಂದಕ್ಕೆ (ಚಂದ್ರಗುಪ್ತ ಮೌರ್ಯ) ನನ್ನ ಅಪ್ಪ ಬರೆದಿದ್ದ ಹಾಡು. ಬಹಳ ಸುಂದರವಾಗಿ ರಾಗ ಸಂಯೋಜಿಸಿ ಹಾಡಿದ್ದರು ಅಪ್ಪ ಆಗ. ಆಗ ನಾನೂ, ಅಕ್ಕನೂ ತುಂಬ ಚಿಕ್ಕವರು. ಆಗೆಲ್ಲ ನಾವು ಹಾಡನ್ನು ತುಂಬ ಮೆಚ್ಚಿಕೊಂಡು, ಕಲಿತುಕೊಂಡು ಯಾವಾಗಲೂ ಅಪ್ಪನೆದುರಿಗೆ ಹಾಡುತ್ತಿದ್ದೆವು. ನಾಟಕವನ್ನು ನೋಡಿದ ನೆನಪನ್ನು ಹಂಚಿಕೊಳ್ಳ ಹೋದರೆ ಅದೊಂದು ದೊಡ್ಡ ಕಥೆಯೇ ಆದೀತು, ಅದೆಲ್ಲ ಇಲ್ಲಿ ಅಮುಖ್ಯ. ಸುಂದರ ಹಾಡನ್ನು ಎಲ್ಲರೊಡನೆ ಹಂಚಿಕೊಳ್ಳುವ ಮನಸ್ಸಾಯಿತು. ಮನಸು ರಾಗವಾಗಿ ಹಾಡನ್ನು ಇನ್ನೂ ಗುನುಗುತ್ತಲೇ ಇದೆ, ಹಳೆಯ ದಿನಗಳಲ್ಲೆಲ್ಲೋ ಕಳೆದುಹೋಗಿದ್ದೇನೆ ಅನ್ನಿಸುತ್ತಿದೆ. :)

ಇಲ್ಲಿದೆ ಹಾಡು.
** ಚಂದ್ರಗುಪ್ತ ಮೌರ್ಯ **
ಪಾಟಲಿಪುತ್ರದ ಅಧಿಪತಿಯಾಗಿ
ಸರ್ವಾರ್ಥಸಿದ್ದಿಯು ಆಳುತಲಿರಲು
ಪಟ್ಟದರಸಿಯಲಿ ನಂದನರುದಯಿಸಿ
ಇಷ್ಟದರಸಿಯಲಿ ಮೌರ್ಯರು ಜನಿಸಿ

ಶೂರ ಮೌರ್ಯನಿಗೆ ನೂರು ತನುಜರು
ಅವರ ಶೌರ್ಯವನು ಸಹಿಸದ ನಂದರು
ಸಮಯ ಸಾಧಿಸಿ ಸೆರೆಯಲಿ ಇರಿಸಿ
ತುತ್ತು ಅನ್ನವನು ಮಾತ್ರವೇ ಒದಗಿಸಿ
ಕೊಲ್ಲಲವರನು ಹವಣಿಸಿದ||

ಸೇಡು ತೀರಿಸೆ ಮೌರ್ಯರು ಚಿಂತಿಸಿ
ತಮ್ಮಾಹಾರವ ಒಬ್ಬನಿಗುಣಿಸಿ
ಚತುರ ಚಂದ್ರನನು ಉಳಿಸಿದರು
ನಂದರ ನಾಶಕೆ ಅಸುನೀಗಿದರು||

ಕಪಟ ಶಿಲ್ಪವನು ಭೇದಿಸಿ ಚಂದ್ರನು
ಬಿಡುಗಡೆಯಾಗಿ ಹೊರಗೆ ಬಂದನು
ಅನ್ನ ಸತ್ರದ ಆ ಹೊರ ಮನೆಯಲಿ
ಬಂಧಿಯಾದನು ಬೇರೆ ರೂಪದಲಿ ||

ಯೋಗಿಯೊಬ್ಬನು ಸತ್ರಕೆ ಬಂದನು
ನಂದರಿಂದ ಅಪಮಾನಿತನಾದನು
ಕುಪಿತನಾಗಿ ಆ ಚಾಣಕ್ಯ
ಶಪಥಗೈದನು ನಂದರಂತ್ಯಕೆ ||

ಚಂದ್ರಗುಪ್ತನನು ಸಖನನಾಗಿಸಿ
ಪರ್ವತರಾಜನ ಸಖ್ಯವ ಬೆಳೆಸಿ
ನಂದಾರಾಳ್ವಿಕೆ ಅಂತ್ಯವಗೊಳಿಸಿ
ಚಂದ್ರಗುಪ್ತನನು ದೊರೆಯಾಗಿಸಿದ||

Tuesday, May 27, 2008

ಅಲೆಬಂದು ಹೋದಮೇಲೆ ..

ನೀಲಿ ಕಡಲಿನ ಅಲೆಗಳು ಎಂದಿಗಿಂತಲೂ ಅಂದು ಹೆಚ್ಚಾಗಿಯೇ ಹುಚ್ಚೆದ್ದಿದ್ದವು. ಇಳಿಸಂಜೆಯ ಬಿಸಿಲೊಡನೆ ಕಡಲ ತೀರದಲ್ಲಿ ಬೆಚ್ಚನೆಯ ಕಾವಿತ್ತು. ಗಾಳಿ ತುಸು ಜೋರಾಗಿಯೇ ಬೀಸುತ್ತಿತ್ತು. ಜಡೆ ಕಟ್ಟದೆ ಹಾಗೆಯೇ ಬಿಟ್ಟಿದ್ದ ನನ್ನ ನೀಳ ಕೂದಲು ಗಾಳಿಗೆ ಹಾರುತ್ತಿತ್ತು. ಸೀರೆಯ ಉದ್ದನೆಯ ಸೆರಗು ಗಾಳಿಯೊಡನೆ ತೇಲುತ್ತಾ ನನ್ನ ನಿನ್ನ ನಡುವೆ ಪರದೆಯಂತೆ ಅನ್ನಿಸುತ್ತಿತ್ತು. ನಮ್ಮೊಡನೆ ಬಂದವರೆಲ್ಲ ಆಚೆಯೆಲ್ಲೋ ನೀರಲ್ಲಿ ಆಡುತ್ತಿದ್ದರು ಅನ್ನಿಸುತ್ತದೆ. ನಂಗೆ ಅದ್ಯಾವುದರ ಪರಿವೆಯಿರಲಿಲ್ಲ. ಅಲ್ಲಿದ್ದಿದ್ದು ನಾವಿಬ್ಬರೇ ಅನ್ನಿಸುತ್ತಿತ್ತು ನನಗೆ. ಪರದೆಯಂತೆ ನಡುವೆ ಹಾರುತ್ತಿದ್ದ ನೀಲಿ ಸೆರಗಿನಾಚೆ ನೀನು ಕಾಣುತ್ತಿದ್ದೆ. ತುಂಬ ಖುಷಿಯಾಗಿದ್ದೆ ನೀನು, ಬಂದು ಹೋಗುತ್ತಿದ್ದ ಅಲೆಗಳೊಡನೆ ಆಡುತ್ತ ನಿನ್ನ ಯಾವತ್ತಿನ ಪ್ರಸನ್ನ ಮುಖಭಾವದಲ್ಲಿ. ನನ್ನಮನವೋ ಯಾವತ್ತಿನಂತೆ ಅಂದೂ ಕೂಡ ದ್ವಂದ್ವ ತುಂಬಿದ ಗೂಡು. ಏನೋ ಕಳವಳ. ಏನನ್ನೋ ನಿರ್ಧರಿಸಬೇಕಾದ ತೀವ್ರತೆ ನನ್ನಲ್ಲಿ.

ಒಮ್ಮೆಕಣ್ಣ ಮುಂದೆ ಹರವಿಕೊಂಡಿದ್ದ ಅಗಾಧ ಜಲರಾಶಿಯನ್ನು ನೋಡಿದೆ. ಏನೋ ಒಂದು ಧನ್ಯತಾ ಭಾವ, ಶರಣಾಗತ ಭಾವ ಮನದಲ್ಲಿ ಉಕ್ಕಿ ಬಂತು. ಸವಿಸ್ತಾರದೆದುರು ತೃಣಮಾತ್ರಳು ನಾನು ಎನ್ನುವ ಭಾವ, ಇದಲ್ಲದೇ ಮತ್ತೆಲ್ಲವೂ ಶೂನ್ಯ ಎನ್ನುವ ಭಾವ ಮನದ ಕಡಲಲ್ಲಿ ಉಕ್ಕಿ ಉಕ್ಕಿ ಬಂತು . ತಿರುಗಿ ನಿನ್ನತ್ತನೋಡಿದೆ. ಮತ್ತದೇ ಭಾವ, ಕಡಲನ್ನು ನೋಡಿದಾಗ ಮನದಲ್ಲಿ ಉಕ್ಕಿದ ಭಾವವೇ ಮತ್ತೊಮ್ಮೆ ಬಂತು. ಹೌದು ಮೊದಲೆಲ್ಲ ನನಗೆ ಕಡಲನ್ನು ಕಣ್ಣುಹಾಯುವಷ್ಟು ದೂರ ನೋಡಿದಾಗ ಮಾತ್ರ ಶರಣಾಗತ ಭಾವ,ಸೋತ ಭಾವ ಬರುತ್ತಿದ್ದಿದ್ದು . ಆಗೊಮ್ಮೆ ನಿನ್ನ ಕಂಡಾಗಿನಿಂದ ನಿನ್ನ ನೋಡಿದಾಗಲೂ ಅದೇ ಭಾವ ಮನದಲ್ಲಿ ಮೂಡುತ್ತದೆ ಯಾಕೋ ಗೊತ್ತಿಲ್ಲ.

ಅಲೆಗಳ ನೀರಿನಿಂದ ಒದ್ದೆಯಾದ ಮರಳಿನ ತೀರದ ಮೇಲೆ ಹೆಜ್ಜೆ ಗುರುತನ್ನು ಇಡುತ್ತಾ ಹಾಗೆಯೇ ಅದೆಷ್ಟೋ ದೂರ ಮೌನವಾಗಿ ನಡೆದು ಹೋಗುವ ಮನಸ್ಸಾಯಿತು ನನಗೆ. ನೀನೂ ನನ್ನೊಡನೆ ಬಂದು ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಬೇಕೆಂಬ ಹಂಬಲ ಮನದಲ್ಲಿತ್ತು. ನೀನೋ ನೀರಲ್ಲಿ ಮುಳುಗೇಳುತ್ತ ಅಲೆಗಳೊಡನೆ ಆಡುತ್ತಿದ್ದೆ. ನನಗೋ ಮಳೆಹನಿಗಳು ಬೀಳುವಾಗಷ್ಟೇ ನೀರಲ್ಲಿ ಆಡಬೇಕೆನಿಸುವುದು. ಅದು ಬಿಟ್ಟರೆ ಕಡಲ ನೀರಲ್ಲಿ ಇಳಿದು ಆಡಬೇಕೆಂದು ಅನ್ನಿಸುವುದೇ ಇಲ್ಲ. ನಾನು ನೀನಿದ್ದ ಕಡೆಗೆ ಬೆನ್ನು ಹಾಕಿ ಹೆಜ್ಜೆ ಮುಂದಿಡಲು ಶುರುವಿಟ್ಟೆ. ನಾನೊಂದಿಷ್ಟು ದೂರ ನಡೆದ ಮೇಲೆ ನೀನು ಓಡೋಡುತ್ತ ಬಂದು ನನ್ನ ಜೊತೆಯಾಗುವೆಯೇನೋ ಅಂದುಕೊಂಡೇ ನಡೆಯಲಾರಂಭಿಸಿದೆ.

ಮರಳಿನ ಮೇಲೆ ಮೂಡುತ್ತಿದ ಅದೆಷ್ಟೋ ಹೆಜ್ಜೆಗುರುತುಗಳನ್ನು ಹಿಂದೆ ಹಾಕುತ್ತ ನಾನು ಅದೆಷ್ಟು ದೂರ ನಡೆದುಬಿಟ್ಟೆನೋ. ಕಾಲನ್ನು ಸೋಕಿ ಹೋದ ಅಲೆಗಳ ಲೆಕ್ಕವಿಡಲಾಗಲಿಲ್ಲ ನನಗೆ. ದೂರ ದೂರದವರೆಗೂ ನೋಡಿದಷ್ಟೂ ಮುಗಿಯದ ನೀಲಿ ಕಡಲು. ನಡೆದಷ್ಟೂ ದೂರವಾದಂತೆ ಕಾಣುವ ಕೈಗೆಟುಕದ ನೀಲಿ ಆಗಸ. ಎಲ್ಲ ನೋಡುತ್ತ ನೀಲಿ ಸೀರೆಯುಟ್ಟಿದ್ದ ನಾನೂ ನೀಲಿ ಅನಂತದಲ್ಲಿ ಲೀನವಾಗುತ್ತಿರುವೆನೇನೋ ಅನ್ನಿಸಿತು.

ಅಷ್ಟು ದೂರ ನಡೆದ ಮೇಲೆ ನೀನೂ ನನ್ನೊಡನೆ ಮೌನವಾಗಿ ನಡೆದುಬರುತ್ತಿರಬಹುದಾ ಅನ್ನಿಸಿ ಹಿಂತಿರುಗಿ ನೋಡಿದೆ. ಇಲ್ಲ ಅಲ್ಲಿ ನೀನಿರಲಿಲ್ಲ. ಅದೆಷ್ಟೋ ದೂರದಲ್ಲಿ ನಾ ಬಿಟ್ಟು ಬಂದ ನೀನು ಇನ್ನೂ ಅಲ್ಲೇನಿಂತಿದ್ದೆ. ದೂರದ ಒಂದು ಅಕೃತಿಯಂತೆ ಕಾಣುತ್ತಿದ್ದೆ. ಒಂದೆರಡು ನಿಮಿಷಗಳ ನಂತರ ನೀನು ನನ್ನತ್ತ ಕೈ ಬೀಸುತ್ತಿರುವುದು ಕಂಡಿತು. ಕ್ಷಣ ನನ್ನ ನೋಟ ಕೊಂಚ ಮಸುಕಾಯಿತು. ಮತ್ತೆ ಮತ್ತೆ ನಿನ್ನತ್ತ ನೋಡಿದೆ. ಇಲ್ಲ, ಆಗ ಅದೇ ಕಡಲಿನ ಮುಂದೆ ಬರುತ್ತಿದ್ದ ಸೋತ ಭಾವ ಧನ್ಯತಾ ಭಾವ ನನ್ನಲ್ಯಾಕೋ ಮೂಡಲಿಲ್ಲ.

ನಾ ನಡೆದು ಬಂದ ದಾರಿಯನ್ನೇನೋಡಿದೆ. ಅಚ್ಚೊತ್ತಿದ್ದ ಹೆಜ್ಜೆ ಗುರುತೊಂದೂ ಕಾಣಲಿಲ್ಲ. ಬಂದು ಹೋದ ಅಲೆಗಳು ಅವುಗಳನ್ನೆಲ್ಲ ಕಡಲ ಮಡಿಲೊಳಗೆಲ್ಲೋ ಸೇರಿಸಿಯಾಗಿತ್ತು. ನಿನ್ನಿಂದ ಬಹಳ ದೂರ ನಡೆದು ಬಂದುಬಿಟ್ಟಿದ್ದೇನೆಂದು ದೃಢವಾಗಿದ್ದು ಆಗಲೇ. ಮರಳಿ ನಿನ್ನೆಡೆಗೆ ಬರಲಾರದಷ್ಟು ದಣಿವಾಗಿದೆಯೆನಿಸಿತು. ಏನೋ ನಿರ್ಧಾರವಾದಂತಾಗಿ ಮನಸ್ಸು ಭಾರವಾದ ನಿಟ್ಟುಸಿರನ್ನು ಹೊರಹಾಕಿತು. ಅಲೆಬಂದು ಹೋದಮೇಲೆ ನಿಶ್ಶಬ್ದವಾದ ದಡದಂತಾಗಿತ್ತು ಮನ.

ಮತ್ತೆ ನಮ್ಮೊಡನೆ ಬಂದವರೆಲ್ಲ ಹೊರಡುವ ಸಮಯವಾಯಿತೆಂದು ಕೂಗುತ್ತಿದ್ದರು. ಕಡಲಿನೆಡೆಗೆ ಬೆನ್ನು ಹಾಕಿ ಎಲ್ಲರೂ ಹೊರಟರು, ನೀನೂ , ನಾನೂ . ಅಷ್ಟು ಹೊತ್ತು ಬೆಳಗುತ್ತಿದ್ದ ಸೂರ್ಯ ನಮ್ಮ ಹಿಂದೆ ಅದೇ ಕಡಲಿನಾಳದಲ್ಲಿ ಮುಳುಗುತ್ತಿದ್ದ.