Tuesday, May 13, 2008

ಹೀಗೊಂದು ಕಥೆ

ಹಿಂದೆ ಒಮ್ಮೆ ಅಮ್ಮ ಹೇಳುವ ಮಂತ್ರ್ಯಪ್ಪನ ಕಥೆ ಹೇಳಿದ್ದೆ. ನಾಕಾರು ದಿನಗಳಿಂದ ಯಾವುದೋ ಒಂದು ಕಾರಣಕ್ಕಾಗಿ ಅಮ್ಮ ಹೇಳುವ ಇನ್ನೊಂದು ಕಥೆ ಪದೇ ಪದೇ ನೆನಪಾಗುತ್ತಿದೆ. ಕಥೆಯನ್ನು ಇಲ್ಲೂ ಯಾಕೆ ಹೇಳಬಾರದು ಅಂತ ಅನ್ನಿಸಿದ್ದಕ್ಕೆ ಈ ಬರಹ.
ಕಥೆ ಹೀಗಿದೆ :
ಒಂದು ಊರು. ಆ ಊರಲ್ಲಿನ ಹಲವು ಜನರಲ್ಲಿ ಒಬ್ಬ ಈ ಕಥೆಯ ನಾಯಕ. ಹೆಸರು ಏನೋ ಗೊತ್ತಿಲ್ಲ. ಈ ಕ್ಷಣಕ್ಕೆ ತಿಮ್ಮ ಅನ್ನೋ ಹೆಸರು ನೆನಪಾಗಿದ್ದಕ್ಕೆ ಅವನ ಹೆಸರು ತಿಮ್ಮ ಎಂದೇ ಇರಲಿ. ತಿಮ್ಮನು ತುಂಬ ವಿಶಾಲವಾದ ಹಣ್ಣಿನ ತೋಟದ ಮಾಲಿಕನಾಗಿದ್ದ. ಅವನ ತೋಟದಲ್ಲಿ ಯಾವಾಗಲೂ ಒಂದಲ್ಲ ಒಂದು ಜಾತಿಯ ಹಣ್ಣುಗಳು ತುಂಬಿಯೇ ಇರುತ್ತಿದ್ದವು. ಬಲು ಸಮೃದ್ಧ ತೋಟ. ಆದರೆ ತಿಮ್ಮ ಬಲು ಜುಗ್ಗ. ಹಣ್ಣನ್ನು ಸುಮ್ಮನೆ ಬೇರೆಯವರಿಗೆ ಕೊಡುವುದಿರಲಿ ಯಾರೊಬ್ಬರೂ ಅವನ ತೋಟದ ಹಣ್ಣುಗಳ ಕಡೆ ಕಣ್ಣೆತ್ತಿ ನೋಡುವುದೂ ಅವನಿಗೆ ಸಹ್ಯವಾಗುತ್ತಿರಲಿಲ್ಲ. ಕೆಲಸದವರ ಮೇಲೂ ಅವನಿಗೆ ಗುಮಾನಿ ಜಾಸ್ತಿ. ಅದಕ್ಕಾಗೇ ಅವನು ಸ್ವತಃ ತಾನೇ ತೋಟದ ಅಂಚಿನಲ್ಲಿದ್ದ ಮಣ್ಣು ದಿಬ್ಬವನ್ನು ಹತ್ತಿ ಕುಳಿತು ತೋಟವನ್ನು ಕಾಯುತ್ತಿದ್ದ.

ತಿಮ್ಮನ ಗುಣದ ಅರಿವಿದ್ದ ಆ ಊರಿನ ಜನ ಅವನ ತೋಟದ ಕಾಲುದಾರಿಯಲ್ಲಿ ನಡೆದು ಹೋಗುವಾಗ ಅಪ್ಪಿತಪ್ಪಿಯೂ ಹಣ್ಣುಗಳನ್ನು ಆಸೆಗಣ್ಣಿನಿಂದ ನೋಡದೆ ಸುಮ್ಮನೆ ತಲೆ ತಗ್ಗಿಸಿಕೊಂಡು ಮುಂದೆ ಹೋಗುತ್ತಿದ್ದರು.

ಜನರು ಕಾಲುದಾರಿಯಲ್ಲಿ ನಡೆದುಹೋಗುವಾಗಲೆಲ್ಲ್ಲ ಮಣ್ಣಿನ ದಿಬ್ಬವನ್ನೇರಿ ಕುಳಿತ ತಿಮ್ಮನು "ಅಯ್ಯ ಯಾಕೆ ಹಂಗೆ ಬಿರ ಬಿರನೆ ಸಾಗುತ್ತಿದ್ದೀರಿ? ಬಿಸಿಲಲ್ಲಿ ನಡೆದು ಬಂದು ದಣಿವಾಗಿರಬಹುದು, ನಮ್ಮ ತೋಟದ ಹಣ್ಣುಗಳನ್ನು ತಿಂದು ಅಲ್ಲೇ ಕೊಳದ ನೀರು ಕುಡಿದು ದಾಹವಾರಿಸಿಕೊಂಡು ಸ್ವಲ್ಪ ಹೊತ್ತು ನೆರಳಿನಲ್ಲಿ ವಿಶ್ರಮಿಸಿಕೊಂಡು ಆಮೇಲೆ ಮುಂದೆ ಹೋಗಿ " ಎನ್ನುತ್ತಿದ್ದ. ದಾರಿಹೋಕರು ಇಲ್ಲವೆಂದು ಎಷ್ಟು ನಿರಾಕರಿಸಿದರೂ ಒತ್ತಾಯಪೂರ್ವಕವಾಗಿ ಅವರನ್ನು ನಿಲ್ಲಿಸುತ್ತಿದ್ದ. "ಸಂಕೋಚಪಡಬೇಡಿ ಹಣ್ಣನ್ನು ಕಿತ್ತುಕೊಳ್ಳಿ" ಅನ್ನುತ್ತಾ ದಿಬ್ಬವನ್ನಿಳಿದು ಬರುತ್ತಿದ್ದ. ತಿಮ್ಮನ ಒತ್ತಾಯಕ್ಕೆ ಮಣಿದು ಆ ದಾರಿಹೋಕನೇನಾದರೂ ಅಲ್ಲಿ ನಿಂತು ಹಣ್ಣನ್ನು ಕೊಯ್ಯಲು ಮುಂದಾದನೋ ಅಲ್ಲಿಗೆ ಅವನ ಕಥೆ ಮುಗಿದಂತೆಯೇ. ಕೆಳಗಿಳಿದು ಬಂದ ತಿಮ್ಮ ದಾರಿಹೋಕನಿಗೆ ಚೆನ್ನಾಗಿ ಬಯ್ಯುತ್ತಿದ್ದ. "ಯಾರು ಹೇಳಿದ್ದು ನಿನಗೆ ? ನನ್ನ ತೋಟದ ಹಣ್ಣನು ಕದ್ದು ತಿನ್ನಲು ಎಷ್ಟು ಧೈರ್ಯ ನಿನಗೆ ? ಇನ್ನೊಂದ್ಸಲ ಈ ಕಡೆ ತಲೆ ಹಾಕಿದ್ರೆ ನೋಡು ಏನು ಮಾಡ್ತೀನಂತ " . ಇನ್ನೂ ಏನೇನೋ ಬೈಗುಳಗಳು.

ಈ ರೀತಿಯ ಅನುಭವ ಊರವರಿಗೆಲ್ಲ ಒಂದಲ್ಲ ಹಲವು ಸಲ ಆಗಿಯೇ ಆಗಿತ್ತು. ಅವರೆಲ್ಲ ಬೇಸತ್ತು ಹೋಗಿದ್ದರು ತಿಮ್ಮನ ಈ ವರ್ತನೆಗೆ. "ಅಲ್ಲ ಅವನೇ ನಾವು ಎಷ್ಟು ಬೇಡವೆಂದು ನಿರಾಕರಿಸಿದರೂ ನಮ್ಮನ್ನು ನಿಲ್ಲಿಸಿ ನಂತರ ಬಂದು ಬಯ್ಯುತ್ತಾನಲ್ಲ. ಏನಾಗಿದೆ ಈ ಮನುಷ್ಯನಿಗೆ? ಒಂದು ಕ್ಷಣದಲ್ಲಿ ಅವನಾಡಿದ್ದೇ ಮಾತು ಅವನಿಗೆ ಮರೆತು ಹೋಗುತ್ತದಾ ? ಮನಸ್ಸು ಬದಲಾಗಿ ಬಿಡುತ್ತದಾ ? ಯಾಕೆ ಹೀಗೆ ?" ಜನರೆಲ್ಲ ಮಾತಾಡಿಕೊಂಡರು.

ಹೀಗೆ ಯೋಚಿಸಿದಾಗ ಅವರೆಲ್ಲರ ಗಮನಕ್ಕೆ ಬಂದಿದ್ದು ತಿಮ್ಮನು ಅವರನ್ನು ಅಕ್ಕರೆಯಿಂದ ಮಾತಾಡಿಸಿ ಹಣ್ಣು ನೀರಿನ ಆತಿಥ್ಯಕ್ಕೆ ಆಮಂತ್ರಿಸುವಾಗ ಅವನು ಮಣ್ಣಿನ ದಿಬ್ಬದ ಮೇಲೆ ಕುಳಿತಿರುತ್ತಿದ್ದ. ಅವನು ಅಲ್ಲಿಂದ ಕೆಳಗಿಳಿದು ಬಂದ ಮೇಲೆ ಬಯ್ಯಲು ಶುರು ಹಚ್ಚುತ್ತಿದ್ದ. ಅಂದರೆ ಆ ಮಣ್ಣಿನ ದಿಬ್ಬದಲ್ಲೇ ಏನೋ ಗುಟ್ಟಿದೆ.

ಸರಿ ಅವರೆಲ್ಲ ದಿಬ್ಬವನ್ನು ಅಗೆದು ಅದರಡಿಯಲ್ಲಿ ಏನಿದೆಯೆಂದು ನೋಡುವ ನಿಶ್ಚಯ ಮಾಡಿಯೇ ಬಿಟ್ಟರು. ತಿಮ್ಮನು ಇಲ್ಲದಿರುವ ಸಮಯಕ್ಕೆ ಕಾದು ಜನರೆಲ್ಲ ದಿಬ್ಬದ ಸುತ್ತ ಜಮಾಯಿಸಿದರು. ದಿಬ್ಬವನ್ನು ಅಗೆಯಲಾಗಿ ಅದರಡಿಯಲ್ಲಿ ವಿಕ್ರಮಾದಿತ್ಯನ ಸಿಂಹಾಸನವಿತ್ತು. ಜನರ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿತು. ವಿಕ್ರಮಾದಿತ್ಯನ ಸಿಂಹಾಸನದ ಮೇಲೆ ಯಾರೇ ಕುಳಿತರೂ ಸಹೃದಯತೆ ಅವರದಾಗುತ್ತದೆಯಂತೆ. ಅದಕ್ಕೇವಿಕ್ರಮಾದಿತ್ಯ ಅಷ್ಟು ಜನಾನುರಾಗಿ ಪ್ರಭುವಾಗಿದ್ದನಂತೆ. ಅಂತೆಯೇ ತಿಮ್ಮನೂ ದಿಬ್ಬದ ಮೇಲೆ ಕುಳಿತಾಗ ಸಹೃದಯನಾಗಿದ್ದು ಕೆಳಗಿಳಿದು ಬಂದ ಮೇಲೆ ಅವನ ಒರಿಜಿನಲ್ ಗುಣ ಅವನದಾಗುತ್ತಿದ್ದಿದ್ದರಿಂದ ಅವನ ವರ್ತನೆ ಹಾಗಿತ್ತು.

ಕೆಲವು ಜನ ನಮ್ಮನ್ನು ಕಂಡಾಗ ಒಮ್ಮೊಮ್ಮೆ ಬಹಳ ಆಪ್ತವಾಗಿ ಮಾತಾಡುತ್ತಾರೆ, ಮತ್ತಿನ್ನೆಲ್ಲೋ ಸಿಕ್ಕಾಗ ಅಪರಿಚಿತರಂತೆ ವರ್ತಿಸುತ್ತಾರೆ, ನಮ್ಮನೆಗೆ ಬಂದಾಗ ತುಂಬ ಆತ್ಮೀಯವಾಗಿ ವರ್ತಿಸುವವರು ಅವರ ಮನೆಗೆ ನಾವು ಹೋದಾಗ ಬೇರೆಯೇ ರೀತಿಯ ವರ್ತನೆ ತೋರಿಸುವುದೂ ಒಮ್ಮೊಮ್ಮೆ ಅನುಭವವಾಗುತ್ತದೆ. ಒಮ್ಮೊಮ್ಮೆ ಏನೇನೋ ಆಶ್ವಾಸನೆ ಇತ್ತವರು, ಆಮೇಲೆ ತಾವು ಹಾಗೆ ಹೇಳಿಯೇ ಇರಲಿಲ್ಲವೆಂಬಂತೆ ವರ್ತಿಸುತ್ತಾರೆ. ಇಂಥ ಸಂದರ್ಭಗಳಲ್ಲೆಲ್ಲ ಅಮ್ಮ "ವಿಕ್ರಮಾದಿತ್ಯನ ಸಿಂಹಾಸನ " ದ ಕಥೆ ಹೇಳಿಯೇ ಇರುತ್ತಾಳೆ.

ಮೊನ್ನೆ ಹೀಗೇ ಯಾವುದೋ ಘಟನೆಯ ಬಗ್ಗೆ ಬಹಳ ಯೋಚನೆ ಮಾಡುತ್ತ ಗೆಳತಿಯೊಬ್ಬಳೊಡನೆ ಮಾತಾಡುತ್ತಿದ್ದಾಗಲಿಂದ ಈ ಕಥೆ ನೆನಪಾಗುತ್ತಿದೆ. ಎಷ್ಟು ಸಂದರ್ಭೋಚಿತ ಕಥೆ ಅಲ್ಲವೇನೆ ಗೆಳತಿ? :)

3 comments:

ಸ್ಮಿತಾ said...

Oudu shyama correct agi suit agutte.. :) avnige .

ಶ್ಯಾಮಾ said...

ಸ್ಮಿತಾ

:) :) inta example bahaLa sigutte bidu :)

ತೇಜಸ್ವಿನಿ ಹೆಗಡೆ said...

ಶ್ಯಾಮಾ,

ಕಥೆ ವಾಸ್ತವವಾಗಿದ್ದು ತುಂಬಾ ಚೆನ್ನಾಗಿದ್ದು... ನಿಜ.. ಕೆಲವೊಮ್ಮೆ ಕೆಲವರು ಒಮ್ಮೆ ತಿಮ್ಮನಾಗಿಯೂ ಒಮ್ಮೊಮ್ಮೆ ವಿಕ್ರಮಾದಿತ್ಯನಂತೆಯೂ ವರ್ತಿಸುತ್ತಾರೆ..